ಮಂಗಳೂರು: ಬಿಜೆಪಿಯ ಯುವ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಶನಿವಾರ ವಶಕ್ಕೆ ಪಡೆದಿದೆ.
ಈಗಾಗಲೇ ಎನ್ಐಎ ಬಂಧನದಲ್ಲಿರುವ ಎಸ್ಡಿಪಿಐ ಮುಖಂಡ ಶಾಫಿ ಬೆಳ್ಳಾರೆಯ ಭಾವ, ಎಸ್ಡಿಪಿಐ ಬೆಳ್ಳಾರೆ ಕಾರ್ಯದರ್ಶಿ ಮೊಹಮ್ಮದ್ ಶಹೀದ್(34) ಬಂಧಿತ. ಈತ ಬೆಳ್ಳಾರೆಯಲ್ಲಿ ಅಡಕೆ ವ್ಯಾಪಾರ ಮಾಡುತ್ತಿದ್ದು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾದ ಹಿನ್ನೆಲೆಯಲ್ಲಿ ಎನ್ಐಎ ತಂಡ ಈತನ ಮನೆಗೆ ದಾಳಿ ನಡೆಸಿ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಘಟನೆಯ ತನಿಖೆಯನ್ನು ಎನ್ಐಎಗೆ ವಹಿಸಿದ ಬಳಿಕ ಆರಂಭದಲ್ಲಿ 10 ಮಂದಿಯನ್ನು ಬಂಧಿಸಲಾಗಿತ್ತು. ಬಳಿಕ ಮೂವರನ್ನು ಬಂಧಿಸಿದ್ದು, ಇದೀಗ ಮತ್ತೋರ್ವನನ್ನು ವಶಕ್ಕೆ ಪಡೆದಿದ್ದು, 14 ಮಂದಿಯನ್ನು ಸೆರೆ ಹಿಡಿದಂತಾಗಿದೆ. ಈತನ ಜತೆಯಲ್ಲಿದ್ದ ಅಗತ್ಯ ಸೊತ್ತುಗಳನ್ನು ಕೂಡ ಎನ್ಐಎ ವಶಕ್ಕೆ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.