ನವದೆಹಲಿ: ಮಾರ್ಚ್ ತಿಂಗಳಿನಲ್ಲಿ ವಿಶೇಷವಾದ ಶ್ರೀ ರಾಮಾಯಣ ಎಕ್ಸ್ಪ್ರೆಸ್ ರೈಲನ್ನು ಬಿಡುವುದಾಗಿ ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ರೈಲಿನ ಒಳ ಮತ್ತು ಹೊರ ಭಾಗವು ಶ್ರೀ ರಾಮನ ಥೀಮ್ ಹೊಂದಿರಲಿದೆ ಎಂದು ಇಲಾಖೆ ತಿಳಿಸಿದೆ.
ರೈಲಿನ ಒಳಗೆ ಶ್ರೀ ರಾಮನ ಥೀಮ್ನಿಂದ ಅಲಂಕಾರ ಮಾಡಲಾಗುವುದು. ರೈಲಿನ ಹೊರ ಭಾಗವನ್ನು ಸಹ ಶ್ರೀ ರಾಮನ ಜೀವನ ಚರಿತ್ರೆಯನ್ನು ಹೇಳುವಂತೆ ಸಿಂಗರಿಸಲಾಗುವುದು. ರೈಲಿನ ಒಳಗೆ ರಾಮನ ಭಜನೆಯನ್ನು ಹಾಕಲಾಗುವುದು ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ತಿಳಿಸಿದ್ದಾರೆ.
ನವೆಂಬರ್ 17ರಂದು ತನ್ನ ಸಂಚಾರವನ್ನು ಆರಂಭಿಸಿದ ಶ್ರೀ ರಾಮಾಯಣ ಎಕ್ಸ್ಪ್ರೆಸ್ ರೈಲಿನ ಮುಂದುವರಿದ ಭಾಗ ಈ ವಿಶೇಷ ರೈಲಾಗಿರಲಿದೆ. ಮಾರ್ಚ್ 10ರ ನಂತರ ಈ ರೈಲು ಸಂಚಾರ ಆರಂಭಿಸಲಿದೆ ಎನ್ನಲಾಗಿದೆ. ಶ್ರೀ ರಾಮಾಯಣ ಎಕ್ಸ್ಪ್ರೆಸ್ ರೈಲಿನಂತೆಯೆ ಈ ರೈಲು ಸಹ ರಾಮನ ಬದುಕಿನ ಹಲವು ಪ್ರಸಿದ್ಧ ಸ್ಥಳಗಳಿಗೆ ಸಂಚಾರ ನಡೆಸಲಿದೆ. ಪ್ರಯಾಣಿಕರಿಗೆ ರೈಲಿನಲ್ಲಿಯೇ ರಾಮನ ದೇವಸ್ಥಾನದಲ್ಲಿರುವಂತಹ ಅನುಭವವನ್ನು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಒಟ್ಟು ನಾಲ್ಕು ಕಡೆಗಳಿಂದ ಈ ರೈಲು ಹೊರಡುವ ನಿರೀಕ್ಷೆಯಿದ್ದು ದೇಶದ ಎಲ್ಲ ಭಾಗದ ಜನರು ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುವುದು ಎನ್ನಲಾಗಿದೆ. ರೈಲ್ವೆ ಇಲಾಖೆ ಸದ್ಯದಲ್ಲೇ ರೈಲು ಪ್ರವಾಸಕ್ಕೆ ಹೊರಡುವ ದಿನಾಂಕ ಮತ್ತು ದರವನ್ನು ಪ್ರಕಟಿಸುವುದಾಗಿ ತಿಳಿಸಿದೆ. (ಏಜೆನ್ಸೀಸ್)