ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿರುವ ಟೋಯಿಂಗ್ ವಿಚಾರ ಸಂಚಾರ ಪೊಲೀಸ್ ವಿಭಾಗವನ್ನಷ್ಟೇ ಅಲ್ಲದೆ ಸರ್ಕಾರವನ್ನೂ ಮುಜುಗರಕ್ಕೆ ಈಡುಮಾಡಿದೆ. ಪರಿಣಾಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮಾತ್ರವಲ್ಲದೆ ಸಿಎಂ-ಗೃಹಸಚಿವರು ಕೂಡ ತಲೆಕೆಡಿಸಿಕೊಂಡಿದ್ದು, ಸಂಚಾರ ಪೊಲೀಸ್ ವ್ಯವಸ್ಥೆಯಲ್ಲಿ ಒಂದು ಹೊಸ ಸಂಚಲನ ಸೃಷ್ಟಿಯಾಗಿದೆ.
ಈ ಸಂಬಂಧ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ವಿಕಾಸಸೌಧದಲ್ಲಿ ನಡೆದಿದ್ದು, ಒಂದಷ್ಟು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆ ಪೈಕಿ ಪ್ರಮುಖವಾಗಿ ಇನ್ನು 15 ದಿನಗಳ ಕಾಲ ಟೋಯಿಂಗ್ ಸ್ಥಗಿತಗೊಳಿಸುವುದು ಎಂದು ನಿರ್ಧರಿಸಲಾಗಿದೆ.
ಅಷ್ಟೇ ಅಲ್ಲದೆ ಟೋಯಿಂಗ್ ಗುತ್ತಿಗೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಸಂಬಂಧಿಕರಿಗೆ ಟೆಂಡರ್ ಕೊಟ್ಟಿರುವ ವಿಚಾರ ಕೂಡ ಪರಿಶೀಲನೆಗೊಳ್ಳಲಿದೆ. ಆ ರೀತಿ ಆಗದಂತೆ ಟೋಯಿಂಗ್ ಗುತ್ತಿಗೆ ನೀಡುವಂತೆ ಕ್ರಮಕೈಗೊಳ್ಳಲಾಗುತ್ತದೆ. ದಂಡದ ವಿಚಾರದಲ್ಲೂ ಮರು ಪರಿಶೀಲನೆ ನಡೆಯಲಿದ್ದು, ಕೆಲವೊಂದು ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ. ಸರ್ಕಾರಿ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದನ್ನು ಕೂಡ ಪರಿಶೀಲನೆ ಮಾಡಲಿದ್ದು, ಅಂಥ ಪ್ರದೇಶದಲ್ಲಿ ಎಲ್ಲಿ ಪಾರ್ಕಿಂಗ್ಗೆ ಜಾಗ ಇದೆ ಎಂಬುದನ್ನು ಪೊಲೀಸರು ಗುರುತಿಸಲಿದ್ದಾರೆ ಎಂದು ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗೃಹಸಚಿವರು ತಿಳಿಸಿದ್ದಾರೆ.
ಸಂಚಾರ ಪೊಲೀಸರು ಸಾರ್ವಜನಿಕರ ಜತೆ ಸಭ್ಯವಾಗಿ ವರ್ತಿಸಬೇಕು ಎಂದು ಪೊಲೀಸರಿಗೆ ತಿಳಿ ಹೇಳುತ್ತೇವೆ. ಇನ್ನು ಮುಂದೆ ಪೊಲೀಸರ ಬಳಿ ಬಾಡಿ ವೋರ್ನ್ ಕ್ಯಾಮರಾ ಇರುತ್ತದೆ. ಎಲ್ಲವೂ ರೆಕಾರ್ಡ್ ಆಗಲಿದೆ. ಒಟ್ಟಾರೆಯಾಗಿ ಟೋಯಿಂಗ್ ಸಂಬಂಧ ಇನ್ನು 15 ದಿನಗಳಲ್ಲಿ ಹೊಸ ನಿಯಮ ರೂಪಿಸಲಾಗುವುದು ಎಂದು ಗೃಹಸಚಿವರು ತಿಳಿಸಿದ್ದಾರೆ.
ಅದರಲ್ಲಿ ಪೊಲೀಸರ ತಪ್ಪಿಲ್ಲ, ಇದರಲ್ಲಿ ತಪ್ಪಿತ್ತು..: ಸಂಚಾರ ಪೊಲೀಸರ ವಿರುದ್ಧದ ಟೀಕೆಗಳಿಗೆ ರವಿಕಾಂತೇಗೌಡ ಲಿಖಿತ ಉತ್ತರ