ಮುಂಬೈ: ನೆಟ್ಫ್ಲಿಕ್ಸ್ನ ಬಹು ಚರ್ಚಿತ ಡಾಕ್ಯೂ ವೆಬ್ಸೀರಿಸ್ ‘ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀದ್ ಟ್ರೂತ್’ ಬಿಡುಗಡೆಗೆ ತಡೆ ನೀಡುವಂತೆ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈ ಕೋರ್ಟ್ ವಿಚಾರಣೆ ನಡೆಸಿದ ಬಳಿಕ ತಿರಸ್ಕರಿಸಿದೆ.
ಇದನ್ನೂ ಓದಿ: ಅಮಿತ್ ಶಾ ಕಾರ್ ನಂಬರ್ ಪ್ಲೇಟ್ನಲ್ಲಿದೆ ವಿಶೇಷ! ‘ಸಂದೇಶ ಸ್ಪಷ್ಟ’ ಎಂದ ನೆಟಿಜನ್ಸ್..ವೀಡಿಯೋ ವೈರಲ್
‘ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀದ್ ಟ್ರೂತ್’ ವೆಬ್ ಸೀರಿಸ್ ಅನ್ನು ನ್ಯಾಯ ಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಮಂಜೂಷಾ ದೇಶಪಾಂಡೆ ಅವರ ವಿಭಾಗೀಯ ಪೀಠ ವೀಕ್ಷಣೆ ಮಾಡಿತ್ತು. ಆ ಸೀರಿಸ್ನಿಂದ ವಿಚಾರಣೆಗೆ ಹಿನ್ನಡೆಯಾಗುವಂತಹ ಯಾವುದೇ ಅಂಶಗಳು ಗಮನಕ್ಕೆ ಬಂದಿಲ್ಲ ಎಂದು ನಿರ್ಣಯವನ್ನು ತೆಗೆದುಕೊಂಡಿದೆ.
ದೇಶದಲ್ಲಿ ಸಂಚಲ ಸೃಷ್ಟಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ನೆಟ್ಫ್ಲಿಕ್ಸ್ ‘ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀದ್ ಟ್ರೂತ್’ ಡಾಕ್ಯೂ ಸೀರಿಸ್ ಅನ್ನು ನಿರ್ಮಾಣ ಮಾಡಿತ್ತು. ಈ ಸೀರಿಸ್ ಅನ್ನು ಕಳೆದ ಫೆಬ್ರವರಿ 23 ರಂದು ಬಿಡುಗಡೆ ಮಾಡುವುದಕ್ಕೆ ನೆಟ್ಫ್ಲಿಕ್ಸ್ ನಿರ್ಧರಿಸಿತ್ತು. ಆದರೆ, ಸಿಬಿಐ ಇನ್ನೂ ಈ ಕೇಸ್ನ ವಿಚಾರ ನಡೆಯುತ್ತಿದ್ದು, ತನಿಖೆಗೆ ಹಿನ್ನಡೆಯಾಗುವ ಸಾಧ್ಯತೆ ಇರುವುದರಿಂದ ವೆಬ್ ಸೀರಿಸ್ಗೆ ತಡೆ ನೀಡುವಂತೆ ಸಿಬಿಐ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿತ್ತು. ಅಲ್ಲಿ ಅರ್ಜಿ ತಿರಸ್ಕರಿಸಿದ ಬಳಿಕ ಸಿಬಿಐ, ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಈ ಸರಣಿಯಲ್ಲಿ ಮಾಡಿರುವ ಆರೋಪಿಗಳು ಹಾಗೂ ಸಾಕ್ಷಿಗಳ ಸಂದರ್ಶನದ ಬಗ್ಗೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ನ್ಯಾಯಾಲಯವು ನ್ಯಾಯಮೂರ್ತಿಗಳು ಮತ್ತು ವಕೀಲರಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಾಡು ಮಾಡುವಂತೆ ನೆಟ್ಫ್ಲಿಕ್ಸ್ಗೆ ಆದೇಶಿಸಿತ್ತು. ಹೀಗಾಗಿ ಬಿಡುಗಡೆ ದಿನವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿತ್ತು. ಡಾಕ್ಯೂ ಸೀರಿಸ್ ವೀಕ್ಷಿಸಿ, ಸಿಬಿಐ ಮನವಿಯನ್ನು ತಿರಸ್ಕರಿಸಿದ ಬಳಿಕ ಬಾಂಬೆ ಹೈ ಕೋರ್ಟ್ನ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಮಂಜೂಷಾ ದೇಶಪಾಂಡೆಯವರ ವಿಭಾಗೀಯ ಪೀಠ ಹೀಗೆ ಹೇಳಿದೆ.
” ಈ ಸೀರಿಸ್ನಲ್ಲಿ ನಮ್ಮ ಗಮನಕ್ಕೆ ಬರುವಂತಹ ಅಂಶ ಏನೂ ಇಲ್ಲ. ಆರಂಭದಲ್ಲಿ ಈ ಸೀರಿಸ್ನಲ್ಲಿ ಏನೋ ಇರಬಹುದು ಎಂದು ಅಂದುಕೊಂಡಿದ್ದೆವು. ಸಾರ್ವಜನಿಕ ಗ್ರಹಿಕೆಯು ನಮ್ಮ ಕಾಳಜಿಯಾಗಿತ್ತು.” ಎಂದು ಹೇಳಿದೆ.
ಏನಿದು ಕೊಲೆ ಪ್ರಕರಣ?: ಉದ್ಯಮಿ ಇಂದ್ರಾಣಿ ಮುಖರ್ಜಿ ಮೇಲೆ ಮಗಳು ಶೀನಾ ಬೋರಾಳನ್ನು ಕೊಲೆ ಮಾಡಿದ ಆರೋಪವಿದೆ. ಈ ಸಂಬಂಧ ಇಂದ್ರಾಣಿ ಮುಖರ್ಜಿ, ಮಾಜಿ ಪತಿಯರಾದ ಸಂಜೀವ್ ಖನ್ನಾ, ಪೀಟರ್ ಮುಖರ್ಜಿಯಾ, ಕಾರು ಚಾಲಕ ಚಾಲಕ ಶ್ಯಾಮ್ವರ್ ರಾಯ್ ಸಹಾಯದಿಂದ ಮಗಳ ಕೊಲೆ ಮಾಡಿರುವ ಆರೋಪವಿದ್ದು ಸಿಬಿಐ ತನಿಖೆ ನಡೆಸುತ್ತಿದ್ದಾರೆ.
2022ರಲ್ಲಿ ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರಾಗಿದ್ದು, ನೆಟ್ಫ್ಲಿಕ್ಸ್ ಸೀರಿಸ್ ಗೆ ಈ ಪ್ರಕರಣದ ಬಗ್ಗೆ ಸಂದರ್ಶನ ನೀಡಿದ್ದಾರೆ. ಇಂದ್ರಾಣಿಯ ಮುಖರ್ಜಿ ಹಾಗೂ ಮೊದಲ ಪತಿ ಸಂಜೀವ ಖನ್ನಾ ಪುತ್ರಿ ಶೀನಾ ಬೋರಾ. ಸಂಜೀವ ಖನ್ನಾ ಜೊತೆ ವಿಚ್ಛೇದನ ಪಡೆದ ಬಳಿಕ ಉದ್ಯಮಿ ಪೀಟರ್ ಮುಖರ್ಜಿಯಾರನ್ನು ವಿವಾಹವಾಗಿದ್ದರು. ಈ ವೇಳೆ ಪೀಟರ್ ಮುಖರ್ಜಿಯಾ ಮೊದಲ ಪತ್ನಿಯ ಪುತ್ರ ರಾಹುಲ್ ಮುಖರ್ಜಿಯಾ ಜೊತೆ ಶೀನಾ ಬೋರಾ ಡೇಟಿಂಗ್ ಮಾಡುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶೀನಾ ಕೊಲೆ ನಡೆದಿರಬಹುದೆಂಬ ಆರೋಪವಿದೆ. ಈ ಪ್ರಕರಣ ಹೊರಬಿದ್ದಾಗ, ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.