ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜಪಕ್ಷಪಾತ) ಕುರಿತಾದ ಚರ್ಚೆ ಹೆಚ್ಚಾಗಿದೆ. ಅಷ್ಟೇ ಅಲ್ಲ, ಸ್ವಜನಪಕ್ಷಪಾತದಿಂದಲೇ ಸುಶಾಂತ್ ಅವರಿಗೆ ಹಲವು ಚಿತ್ರಗಳು ಕೈತಪ್ಪಿದವು ಮತ್ತು ಅದೇ ಖಿನ್ನತೆಯಿಂದ ಅವರು ಆತ್ಮಹತ್ಯೆಗೆ ಶರಣಾದರು ಎಂಬ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ಪೊಲೀಸರು ವಿಚಾರಣೆಗೆ ಕರೆದರೆ ಬರಲು ಸಿದ್ಧ ಎಂದ ಕಂಗನಾ
ಅದೇ ಕಾರಣಕ್ಕೆ, ಇತ್ತೀಚೆಗೆ ಸುಶಾಂತ್ ಕುಟುಂಬದವರು ನೆಪೋಮೀಟರ್ ಎಂಬ ಆಪ್ವೊಂದನ್ನು ಶುರು ಮಾಡಿದ್ದರು. ಒಂದು ಚಿತ್ರದಲ್ಲಿ ಸ್ವಜನಪಕ್ಷಪಾತ ಎಷ್ಟಿರುತ್ತದೆ ಎಂದು ಲೆಕ್ಕ ಹಾಕುವುದಕ್ಕೆ ಈ ಆಪ್ ಉಪಯೋಗಕ್ಕೆ ಬರಲಿದೆ ಎಂದು ಹೇಳಿದ್ದರು.
ನೆಪೋಮೀಟರ್ ಶುರು ಮಾಡಿರುವುದು ಹಣ ಮಾಡುವ ಉದ್ದೇಶಕ್ಕಲ್ಲ ಎಂದು ಈಗ ಸುಶಾಂತ್ ಅವರ ಬಾವ ವಿಶಾಲ್ ಕೀರ್ತಿ ಹೇಳಿಕೊಂಡಿದ್ದಾರೆ. ‘ಸುಶಾಂತ್ ಸಾವಿನಿಂದ ನಾವು ಇನ್ನೂ ಹೊರಗೆ ಬಂದಿಲ್ಲ. ಈ ನೆಪೋಮೀಟರ್ನಿಂದ ನಮಗೆ ಯಾರನ್ನೂ ಹೆದರಿಸುವ ಅಥವಾ ಹಣ ಮಾಡುವ ಉದ್ದೇಶವಿಲ್ಲ. ಈ ಆಪ್ನಿಂದ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ವಿಶಾಲ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ನೆಪೋಮೀಟರ್ ಶುರುವಾದ ನಂತರ, ಮಹೇಶ್ ಭಟ್ ನಿರ್ದೇಶನದ ‘ಸಡಕ್ 2’ ಚಿತ್ರದಲ್ಲಿ ನೆಪೋಟಿಸಂ ಎಷ್ಟಿದೆ ಎಂದು ಕೇಳಲಾಗಿತ್ತು. ಈ ಚಿತ್ರದ ಐದು ವಿಭಾಗಗಳಲ್ಲಿ ತೊಡಗಿಸಿಕೊಂಡಿರುವ ಜನರು ಯಾರ್ಯಾರ ಸಂಬಂಧಿ ಮತ್ತು ಸ್ವಜನಪಕ್ಷಪಾತವೆಂಬುದು ಇಲ್ಲಿ ಎಷ್ಟು ವರ್ಕೌಟ್ ಆಗಿದೆ ಎಂದು ಅಳೆದು-ತೂಗಿ ಜನ ಮತ ಹಾಕಿದ್ದರು. ಅದರ ಪ್ರಕಾರ, ‘ಸಡಕ್ 2’ ಚಿತ್ರದಲ್ಲಿ ಶೇ 98ರಷ್ಟು ಸ್ವಜನಪಕ್ಷಪಾತವಿದೆ ಎಂಬ ವಿಷಯ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಸರೋಜಾ ಖಾನ್ ಜತೆ ಕೆಲಸ ಮಾಡಿದ್ದೇ ನನ್ನ ಭಾಗ್ಯ; ಪ್ರಿಯಾಂಕಾ ಉಪೇಂದ್ರ
ಹೀಗೆ ಉತ್ತರ ಬಂದ ಹಿನ್ನೆಲೆಯಲ್ಲೇ, ನೆಪೋಮೀಟರ್ ಕುರಿತು ಚರ್ಚೆ ಬಾಲಿವುಡ್ನಲ್ಲಾಗಿತ್ತು. ಅಂಥದ್ದೊಂದು ಆಪ್ ಮಾಡುವ ಉದ್ದೇಶವೇನಿತ್ತು, ಅದರ ಹಿಂದೆ ದುಡ್ಡು ಮಾಡುವುದು ನಿಜವಾದ ಉದ್ದೇಶವಾ ಎಂಬ ಪ್ರಶ್ನೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಿಶಾಲ್ ಕೀರ್ತಿ ಇದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ.