ಕೊಳ್ಳೇಗಾಲ: ತಾಲೂಕಿನ ನರೀಪುರ ರಾಷ್ಟ್ರೀಯ ಹೆದ್ದಾರಿ (209) ಗುಂಡಿಗಳಿಗೆ ತೇಪೆ ಹಾಕಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.
ಮೃತ್ಯು ಕೂಪವಾದ ನರೀಪುರ ರಾಷ್ಟ್ರೀಯ ಹೆದ್ದಾರಿ ಶೀರ್ಷಿಕೆಯಡಿ ಫೆ.20ರ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಪಟ್ಟಣ ವ್ಯಾಪ್ತಿ ಮುಗಿದು ನರೀಪುರ ಗ್ರಾಮಕ್ಕೆ ತೆರಳುವ ರಸ್ತೆಯ ಗುಂಡಿಗಳಿಂದ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದರು. ಇದು ಬೆಂಗಳೂರು ಮುಖ್ಯ ರಸ್ತೆಯಾಗಿರುವುದರಿಂದ ವಾಹನ ದಟ್ಟಣೆಯೂ ಹೆಚ್ಚಿದ್ದು, ಬೈಕ್ ಸವಾರರು ಬಿದ್ದಿರುವ ಸಾಕಷ್ಟು ಉದಾಹರಣೆ ಇವೆ. ಈ ಬಗ್ಗೆ ಹೆದ್ದಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.
ಮೃತ್ಯುಕೂಪವಾಗಿರುವ ರಸ್ತೆ ಗುಂಡಿಗಳನ್ನು ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರಿಗೆ ಪತ್ರಿಕೆ ಮೂಲಕ ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಅವರು ಹೆದ್ದಾರಿ ಅಧಿಕಾರಿಗಳನ್ನು ಸಂಪರ್ಕಿಸಿ ರಸ್ತೆ ದುರಸ್ತಿಗೊಳಿಸುವಂತೆ ತಾಕೀತು ಮಾಡಿದ್ದರು. ಇದ್ದರಿಂದ ಎಚ್ಚೆತ್ತ ಹೆದ್ದಾರಿ ಅಧಿಕಾರಿಗಳು ಗುಂಡಿಗಳಿಗೆ ಡಾಂಬರ್ ಹಾಕಿದ್ದಾರೆ.