ಚಿತ್ರದುರ್ಗ: ಲಕ್ನೋದಲ್ಲಿ ಮಾ.31 ರಿಂದ ಏಪ್ರಿಲ್ 4 ರವರೆಗೆ ನಡೆಯುವ 20 ವರ್ಷ ವಯೋಮಿತಿಯ ಬಾಲಕಿಯರ 43 ನೇ ರಾಷ್ಟ್ರೀಯ ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಲಿರುವ ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪಿಝಾ ಕೌಸರ್, ಸಾನಿಯಾ ಅವರಿಗೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಕ್ರೀಡಾಪಟುಗಳನ್ನು ಬೀಳ್ಕೊಟ್ಟು ಮಾತನಾಡಿ, ಆತಂಕ, ಉದ್ವೇಗಕ್ಕೆ ಒಳಗಾಗದೆ ಸಮಚಿತ್ತದಿಂದ ಭಾಗವಹಿಸಿ, ಗೆಲುವು ಸಾಧಿಸುವಂತೆ ಹಾರೈಸಿದರು.
ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವುದು ಕೋಟೆ ನಗರಿ ಚಿತ್ರದುರ್ಗ ಜಿಲ್ಲೆಗೆ ಹೆಮ್ಮೆಯ ಸಂಗತಿ. ಕ್ರೀಡೆಗಳು ಯಾವುದೇ ಇರಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಭವಿಷ್ಯದಲ್ಲಿ ಎಲ್ಲ ಕ್ರೀಡೆಗಳಿಗೂ ಪ್ರಾತಿನಿಧ್ಯ ನೀಡಲು, ನಿಧಿ ಸ್ಥಾಪಿಸುವುದಾಗಿ ಶ್ರೀಗಳು ಹೇಳಿದರು.
ಹೊನ್ನಾಳಿಯಲ್ಲಿ ಮಾ.14ರಿಂದ ನಡೆದ ರಾಜ್ಯ ಮಟ್ಟದ ಹ್ಯಾಂಡ್ಬಾಲ್ ತರಬೇತಿಯಲ್ಲಿ ಶಿಬಿರಾರ್ಥಿಗಳಾಗಿದ್ದ ಇಬ್ಬರೂ ಭಾನುವಾರ ಲಕ್ನೋಗೆ ಪ್ರಯಾಣ ಬೆಳೆಸಿದರು.
ಜಿಲ್ಲಾ ಹ್ಯಾಂಡ್ಬಾಲ್ ಸಂಸ್ಥೆ ಅಧ್ಯಕ್ಷರು ಶ್ರೀಗಳ ನೇತೃತ್ವದಲ್ಲಿ ಆಟಗಾರರನ್ನು ಗೌರವಿಸಲಾಯಿತು. ಶ್ರೀಗಳು ಇಬ್ಬರಿಗೂ ತಲಾ 5 ಸಾವಿರ ರೂ. ನಗದು ನೀಡಿದರು. ಜಿಲ್ಲಾ ಹ್ಯಾಂಡ್ಬಾಲ್ ಸಂಸ್ಥೆ ಉಪಾಧ್ಯಕ್ಷ ರೆಹಮಾನ್, ಎಂ.ಎಚ್.ಜಯಣ್ಣ, ಹ್ಯಾಂಡ್ಬಾಲ್ ತರಬೇತುದಾರ ರಾಘವೇಂದ್ರ, ಪತ್ರಕರ್ತ ಲಕ್ಷ್ಮಣ್ ಮತ್ತಿತರರಿದ್ದರು.