ದೇವದುರ್ಗ: ಮಾದಕ ವಸ್ತುಗಳ ಸೇವನೆ ಅತ್ಯಂತ ಅಪಾಯಕಾರಿಯಾಗಿದ್ದು, ನೇರವಾಗಿ ಸಾವನ್ನೇ ಆಹ್ವಾನಿಸಿದಂತೆ. ಫ್ಯಾಷನ್ ಹೆಸರಿನಲ್ಲಿ ಯುವಜನತೆ ದುಶ್ಚಟಗಳ ದಾಸರಾಗದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನೋರೋಗ ತಜ್ಞ ಡಾ.ಮನೋಹರ ಪತ್ತಾರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಮಾದಕ ವಸ್ತು ಸೇವಿಸದಂತೆ ಯುವಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಮಾದಕ ವಸ್ತು ಸೇವನೆ ಹಾಗೂ ಸಾಗಣೆ ಶಿಕ್ಷಾರ್ಹ ಅಪರಾಧವಾಗಿದೆ. ಹಣದ ಆಸೆಗಾಗಿ ಇಂಥ ಕೆಲಸದಲ್ಲಿ ಭಾಗವಹಿಸುವ ಯುವಕರಿಗೆ ಪಾಲಕರು ತಿಳಿವಳಿಕೆ ಮೂಡಿಸಬೇಕಿದೆ. ಬಹುಮುಖ್ಯವಾಗಿ ಆರೋಗ್ಯ ಇಲಾಖೆಯಿಂದ ಶಾಲೆ-ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಅರಿವು ಮೂಡಿಸಬೇಕು ಎಂದು ಡಾ.ಮನೋಹರ ಪತ್ತಾರ ತಿಳಿಸಿದರು.