ಅರಸೀಕೆರೆ: ತಾಲೂಕಿನ ಬಂಡೀಹಳ್ಳಿ ಗ್ರಾಮದ ಶ್ರೀ ರೇವಣಸಿದ್ದೇಶ್ವರಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು.
ದೇಗುಲದ ಆವರಣದಲ್ಲಿ ಕೊಂಡ ಹಾಯುವುದು ಸೇರಿ ಹಲವು ಧಾರ್ಮಿಕ ವಿಧಿ ವಿಧಾನಗಳು ಎರಡು ದಿನ ನೆರವೇರಿದವು. ಸರ್ವಾಲಂಕೃತ ರಥದಲ್ಲಿ ಶ್ರೀ ರೇವಣಸಿದ್ದೇಶ್ವರರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಪೂಜಾ ಕೈಂಕರ್ಯಗಳ ಬಳಿಕ ಮಹಾಮಂಗಳಾರತಿ ಮಾಡುತ್ತಿದ್ದಂತೆ ನೆರೆದಿದ್ದ ಜನರು ಜಯಘೋಷದೊಂದಿಗೆ ರಥಕ್ಕೆ ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ದೇವಾಲಯ ಸಮಿತಿ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು.
ಬೊಮ್ಮೇನಹಳ್ಳಿ, ಕೋಡಿಹಳ್ಳಿ, ಕೆಲ್ಲಂಗೆರೆ, ಚೆಲ್ಲಾಪುರ, ಲಕ್ಷ್ಮೀದೇವರಹಳ್ಳಿ, ಸೂಳೆಕೆರೆ, ದುಮ್ಮೇನಹಳ್ಳಿ, ಚಂದ್ಲಾಪುರ, ಅಗ್ಗುಂದ ಸೇರಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ಪಾಲ್ಗೊಂಡಿದ್ದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ದೇವರ ದರ್ಶನ ಪಡೆದರು.