ಮೈಸೂರು: ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಮೈಸೂರು ತಾಲೂಕಿನ ಮಾರ್ಬಳ್ಳಿ ಕೆರೆಯಲ್ಲಿ ಗೋಣಿಚೀಲದಲ್ಲಿ ಶವ ಪತ್ತೆಯಾಗಿದ್ದಾರೆ.
ಶ್ವೇತಾ (20) ಮೃತ ದುರ್ದೈವಿ. ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದ ಶಿವಮ್ಮ ಎಂಬುವರ ಪುತ್ರಿ ಶ್ವೇತಾ ನಾಪತ್ತೆಯಾಗಿದ್ದಾಳೆಂದು 3 ದಿನಗಳ ಹಿಂದೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶ್ವೇತಾ ಸೋದರ ಮಾವ ಶಶಿಕುಮಾರ್ ಎಂಬಾತನನ್ನು 2 ವರ್ಷಗಳ ಹಿಂದೆ ವಿವಾಹವಾಗಿದ್ದಳು. ಪತಿ ಕಾಸರಗೋಡು ಜಿಲ್ಲೆಯ ಹೋಟೆಲ್ವೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಒಂದೂವರೆ ತಿಂಗಳ ಹಿಂದೆ ಸ್ವಗ್ರಾಮ ಕೆಂಬಾಲುಗೆ ಶ್ವೇತಾ ಆಗಮಿಸಿದ್ದರು. 3 ದಿನಗಳ ಹಿಂದೆ ತಾಯಿಯ ಜತೆ ಮಲಗಿದ್ದ ಸಂದರ್ಭದಲ್ಲಿ ಮಧ್ಯರಾತ್ರಿಯಲ್ಲಿ ಶ್ವೇತಾ ದಿಢೀರ್ ನಾಪತ್ತೆಯಾಗಿದ್ದರು.
ಇದನ್ನೂ ಓದಿ: ಕೋವಿಡ್ ಲಸಿಕೆ ಅಡ್ಡಪರಿಣಾಮ ಆರೋಪ: ಸ್ವಯಂಸೇವಕನ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ!
ಆದರೆ, ಇಂದು ಮಾರ್ಬಳ್ಳಿ ಗ್ರಾಮದ ಕೆರೆಯಲ್ಲಿ ಗೋಣಿಚೀಲದಲ್ಲಿ ಶ್ವೇತಾ ಶವ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಕೆಂಬಾಲು ಗ್ರಾಮದ ಶಿವು ಎಂಬಾತನ ಮನೆಯ ಮೇಲೆ ಮೃತಳ ಸಂಬಂಧಿಕರು ದಾಂಧಲೆ ನಡೆಸಿದ್ದಾರೆ. ಅನ್ಯವರ್ಗದ ಯುವಕ ಶಿವು ಎಂಬಾತನ ಮನೆಯ ಮುಂಭಾಗದಲ್ಲಿದ್ದ 2 ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ, ಮನೆಯ ಹೆಂಚುಗಳನ್ನು ಒಡೆದು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ವೇತಾ ಜತೆ ಶಿವು ಅನೈತಿಕ ಸಂಬಂಧ ಬೆಳೆಸಿದ್ದ ಆರೋಪ ಕೇಳಿ ಬಂದಿದ್ದು, ಇದೀಗ ಶಿವು ಕೆಂಬಾಲು ಗ್ರಾಮದಿಂದ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹಾಗೂ ಹುಲ್ಲಹಳ್ಳಿ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)