ನಾಗಮಂಗಲ: ಭಾನುವಾರ ಸಂಜೆ ಮತ್ತು ರಾತ್ರಿ ಸುರಿದ ಮಳೆಯಿಂದಾಗಿ ಹಾನಿಗೊಳಗಾಗಿರುವ ತಾಲೂಕಿನ ಕಸಬಾ ಹೋಬಳಿ ಬೆಟ್ಟದಮಲ್ಲೇನಹಳ್ಳಿ ಸೇರಿ ವಿವಿಧ ಪ್ರದೇಶಗಳಿಗೆ ಶಾಸಕ ಸುರೇಶ್ಗೌಡ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಸೋಮವಾರ ಉದ್ಘಾಟನೆ ಆಗಬೇಕಿತ್ತು. ಆದರೆ, ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಘಟಕದ ಛಾವಣಿ ತೂರಿಹೋಗಿ ಯಂತ್ರೋಪಕರಣಗಳು ಹಾನಿಗೀಡಾಗಿವೆ.
ಅಲ್ಲದೆ, ಸರ್ಕಾರಿ ಶಾಲಾ ಕಟ್ಟಡದ ಮೇಲೆ ಭಾರಿ ಮರ ಬಿದ್ದ ಪರಿಣಾಮ ಎರಡು ಕೊಠಡಿ, ಅಡುಗೆ ಮನೆ ಮತ್ತು ಕಾಂಪೌಂಡ್ ಧ್ವಂಸಗೊಂಡು, ಪೀಠೋಪಕರಣ ಸೇರಿ ಲಕ್ಷಾಂತರ ರೂ. ಮೌಲ್ಯದ ಪದಾರ್ಥಗಳು ಹಾನಿಗೊಳಗಾಗಿವೆ. ಗ್ರಾಮದ ಹದಿನೈದಕ್ಕೂ ಹೆಚ್ಚು ಮನೆಗಳ ಹೆಂಚು ಮತ್ತು ಸಿಮೆಂಟ್ ಶೀಟ್ಗಳು ತೂರಿಹೋಗಿವೆ.
ಈ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಗ್ರಾಮಸ್ಥರಿಗೆ ಧೈರ್ಯ ತುಂಬಿದ ಶಾಸಕರು, ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಾನಿಗೊಳಗಾಗಿರುವ 13 ಮನೆಗಳ ಮಾಲೀಕರಿಗೆ ವೈಯಕ್ತಿಕವಾಗಿ ಪರಿಹಾರ ನೀಡಿದರು.