ಮೈಸೂರು: ವಿಶ್ವವನ್ನೇ ಕಾಡುತ್ತಿರುವ ಕರೊನಾ ವೈರಸ್ ಬಗ್ಗೆ ನಮ್ಮ ಜನ ಹೆಚ್ಚು ಭಯಪಡಬೇಕಿಲ್ಲ. ಬೇಜವಾಬ್ದಾರಿ ತೋರದೆ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಜಾಗ್ರತೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಸಲಹೆ ನೀಡಿದರು.
ತಾಲೂಕಿನ ವರಕೋಡು ಗ್ರಾಮದಲ್ಲಿ ಬೀರೇಶ್ವರ ದೇವಸ್ಥಾನ ಮರು ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೋಂಕಿಗೆ ತುತ್ತಾದ ನೂರು ಜನರ ಪೈಕಿ ಮೂವರು ಮೃತಪಡುತ್ತಿದ್ದಾರೆ ಎನ್ನುವ ವರದಿ ಇದೆ. ಆದ್ದರಿಂದ ಜನರು ಎಚ್ಚರಿಕೆ ವಹಿಸಬೇಕು. ಹೊರ ಹೋದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಗಾಗ ಸ್ಯಾನಿಟೈಸರ್ ಬಳಸಬೇಕು ಎಂದು ಸಲಹೆ ನೀಡಿದರು.
ತಜ್ಞರ ಪ್ರಕಾರ ಭಾರತದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಆದ್ದರಿಂದ ಎಷ್ಟೋ ಜನರಿಗೆ ಕರೊನಾ ವೈರಸ್ ಕಂಡು ಬಂದರೂ ಅದು ಹಾಗೇ ಹೋಗುತ್ತಿದೆ ಎಂದು ಹೇಳಲಾಗಿದೆ. ಸ್ವಚ್ಛತೆಗೆ ಒತ್ತು ನೀಡಬೇಕು ಎನ್ನುವ ಉದ್ದೇಶದಿಂದಲೇ ಹಿಂದಿನ ಕಾಲದಲ್ಲಿ ಕೈ-ಕಾಲು ತೊಳೆಯಲು ಮನೆ ಮುಂದೆ ಪಾತ್ರೆಯಲ್ಲಿ ನೀರು ಇಡುತ್ತಿದ್ದರು ಎಂದರು.
ದೊಡ್ಡ ಪಟ್ಟಣ, ನಗರ ಪ್ರದೇಶ, ಹೊರ ರಾಜ್ಯ, ಹೊರ ದೇಶದಿಂದ ಬಂದವರಿಂದ ಮಾತ್ರ ಕರೊನಾ ಬರುತ್ತಿದೆ. ಈಗಲೂ ಗ್ರಾಮೀಣ ಭಾಗದಲ್ಲಿ ಕರೊನಾ ಅಷ್ಟಾಗಿ ಕಂಡುಬರುತ್ತಿಲ್ಲ. ಆದರೂ ನಮ್ಮಲ್ಲಿ ಇನ್ನು ಹೆಚ್ಚಿನ ಪರೀಕ್ಷೆಗಳು ನಡೆದು ಈ ವೈರಸ್ಗೆ ಆದಷ್ಟು ಬೇಗ ಔಷಧ ಕಂಡು ಹಿಡಿಯಬೇಕಿದೆ ಎಂದು ಹೇಳಿದರು.
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಮಾಜಿ ಉಪಾಧ್ಯಕ್ಷ ವಿ.ಜಿ.ಅಪ್ಪಾಜಿಗೌಡ, ಮಾಜಿ ಸದಸ್ಯ ಕೆಂಪೀರಯ್ಯ, ಎಪಿಎಂಸಿ ಅಧ್ಯಕ್ಷ ಕೆ.ಪ್ರಭುಸ್ವಾಮಿ, ಸದಸ್ಯ ಬಸವರಾಜು, ಗ್ರಾಪಂ ಅಧ್ಯಕ್ಷೆ ಭವಾನಿ, ತಾಪಂ ಸದಸ್ಯ ಸಿ.ಎಂ. ಸಿದ್ದರಾಮೇಗೌಡ, ಎಂ.ಟಿ.ರವಿಕುಮಾರ್, ಬಿ.ಜೆ.ವಿಜಯಕುಮಾರ್, ನಾಡನಹಳ್ಳಿ ರವಿ, ನಜರ್ಬಾದ್ ನಟರಾಜು, ವರಕೋಡು ದೊಡ್ಡೇಗೌಡ, ಜೆ.ಜೆ. ಆನಂದ, ಉಮೇಶ್ ಹಾಜರಿದ್ದರು.