ಲಖನೌ: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿರುವ ಮದರಸಾವೊಂದು ಹಿಂದು-ಮುಸ್ಲಿಂ ಐಕ್ಯತೆಗೆ ಸಾಕ್ಷಿಯಾಗಿ ನಿಂತಿದೆ.
ಗುಲ್ಶಾನ್ ಇ ಬಾಗ್ದಾದ್ ಎಂಬ ಮದರಸಾದಲ್ಲಿ ಬರೀ ಮುಸ್ಲಿಂ ಮಕ್ಕಳಷ್ಟೇ ಓದುತ್ತಿಲ್ಲ. ಇಲ್ಲಿ ಅಪಾರ ಸಂಖ್ಯೆಯಲ್ಲಿ ಹಿಂದು ಮಕ್ಕಳೂ ಕಲಿಯುತ್ತಿದ್ದಾರೆ. ಇಲ್ಲಿ ಮುಸ್ಲಿಂ ಮಕ್ಕಳಿಗೆ ಸಂಸ್ಕೃತವನ್ನು ಕಲಿಸಲಾಗುತ್ತದೆ. ಹಾಗೇ ಹಿಂದು ಮಕ್ಕಳಿಗೆ ಉರ್ದು ಪಾಠವೂ ನಡೆಯುತ್ತದೆ. ಈ ಕಾರಣಕ್ಕೆ ಗುಲ್ಶಾನ್ ಇ ಬಾಗ್ದಾದ್ ಮದರಸಾ ತುಂಬ ವಿಭಿನ್ನ ಎನ್ನಿಸುತ್ತದೆ.
ಮದರಸಾದಲ್ಲಿ ಒಟ್ಟು 230 ವಿದ್ಯಾರ್ಥಿಗಳಿದ್ದು ಅದರಲ್ಲಿ 30 ಹಿಂದು ವಿದ್ಯಾರ್ಥಿಗಳು ಮತ್ತು 50ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ಸಂಸ್ಕೃತ ಕಲಿಯುತ್ತಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಉರ್ದು ಮತ್ತು ಅರೇಬಿಕ್ ಕಲಿಸಲು ಇಬ್ಬರು ಶಿಕ್ಷಕರು ಇದ್ದಾರೆ. ಹಾಗೇ ಉಳಿದ ವಿಷಯಗಳನ್ನು ಕಲಿಸಲು ಒಟ್ಟು ನಾಲ್ವರು ಇದ್ದು ಅದರಲ್ಲಿ ನರೇಶ್ ಬಹದ್ದೂರ್ ಶ್ರೀವಾಸ್ತವಾ ಎಂಬುವರು ಸಂಸ್ಕೃತ ಪಾಠ ಮಾಡುತ್ತಾರೆ.
ಮದರಸಾದ ಪ್ರಾಂಶುಪಾಲ ಕರಿ ಮಹಮ್ಮದ್ ರಶೀದ್ ಮಾಧ್ಯಮಗಳ ಬಳಿ ಮಾತನಾಡಿ, ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ. ಮುಸ್ಲಿಂ ಮಕ್ಕಳಿಗೂ ಸಂಸ್ಕೃತ, ಹಿಂದಿ ಕಲಿಸಲಾಗುತ್ತಿದೆ ಎಂದಿದ್ದಾರೆ.
ಕೆಲವು ಮುಸ್ಲಿಮೇತರ ಮಕ್ಕಳು ಉರ್ದು ಕಲಿಯುತ್ತಿದ್ದರೆ, ಮತ್ತೆ ಒಂದಷ್ಟು ಜನ ಅರೇಬಿಕ್ ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವರು ಉರ್ದು ಮತ್ತು ಸಂಸ್ಕೃತ ಎರಡನ್ನೂ ಅಭ್ಯಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಮದರಸಾದಲ್ಲಿ ಪರ್ಸಿಯನ್, ವಿಜ್ಞಾನ, ಇಂಗ್ಲಿಷ್, ಗಣಿತಗಳನ್ನೂ ಕಲಿಸಲಾಗುತ್ತಿದೆ.(ಏಜೆನ್ಸೀಸ್)