ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಪತ್ರ ನೀಡಲು ಅರಮನೆ ಮೈದಾನಕ್ಕೆ ಬೆಂಬಲಿಗರೊಂದಿಗೆ ತೆರಳಿದ ಶಾಸಕ ಮುನಿರತ್ನ ಭಾರೀ ಹೈಡ್ರಾಮವನ್ನು ಸೃಷ್ಟಿಸಿದರು.
ಅಮೃತ ನಗರೋತ್ಥಾನ ಯೋಜನೆಯಡಿ ಆರ್.ಆರ್. ನಗರಕ್ಕೆ ಅನುಮೋದನೆಯಾಗಿದ್ದ 126 ಕೋಟಿ ರೂ. ಅನುದಾನಕ್ಕೆ ತಡೆ ನೀಡಲಾಗಿದೆ. ಈ ಅನುದಾನ ಪುನಃ ವಾಪಸ್ ನೀಡುವಂತೆ ಆಗ್ರಹಿಸಿ ಬುಧವಾರ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಮುಂದೆ ತಮ್ಮ ಬೆಂಬಲಿಗರೊಂದಿಗೆ ಮುನಿರತ್ನ ಧರಣಿ ನಡೆಸಿದರು. ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ನಿರ್ಧರಿಸಿದ್ದರು. ಆದರೆ, ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ, ಸಿದ್ದರಾಮಯ್ಯರ ಜತೆ ಮಾತನಾಡುತ್ತೇನೆ ಎಂದು ಮನವೊಲಿಸಿದ ಬಳಿಕ ಮುನಿರತ್ನ ಸತ್ಯಾಗ್ರಹ ಕೈಬಿಟ್ಟರು.
ಡಿಕೆಶಿ ಭೇಟಿ ವೇಳೆ ಹೈಡ್ರಾಮ
ತುಳುಕೂಟಕ್ಕೆ 50 ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ಕಂಬಳ ಆಯೋಜಿಸಲಾಗಿದೆ. ನವೆಂಬರ್ 24, 25, 26ರಂದು ಕಂಬಳ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಅರಮನೆ ಮೈದಾನದಲ್ಲಿ ಕಂಬಳದ ಕರೆ ಪೂಜೆ (ಭೂಮಿ ಪೂಜೆ) ನೆರವೇರಿಸಲಾಯಿತು. ಮುನಿರತ್ನ ಅವರು ತಮ್ಮ ಬೆಂಬಲಿಗರೊಂದಿಗೆ ಡಿಕೆಶಿ ಭೇಟಿಯಾಗಲು ಅರಮನೆ ಮೈದಾನಕ್ಕೆ ಆಗಮಿಸಿದರು. ಡಿಕೆಶಿ ಬಳಿ ತೆರಳಿ ಮನವಿ ಪತ್ರವನ್ನು ನೀಡುವಾಗ ಮುನಿರತ್ನ ಅವರು ಡಿಕೆಶಿ ಕಾಲಿಗೆ ಬೀಳುವ ಮೂಲಕ ಹೈಡ್ರಾಮ ಸೃಷ್ಟಿ ಮಾಡಿದರು. ಅನುದಾನ ಬಿಡುಗಡೆ ಮಾಡುವಂತೆ ಡಿಕೆಶಿ ಬಳಿ ಮನವಿ ಮಾಡಿದರು. ಈ ವೇಳೆ ಡಿಕೆಶಿ ಮನವಿಯನ್ನು ಸ್ವೀಕಾರ ಮಾಡಿದರು.
ಸೀನ್ ಕ್ರಿಯೆಟ್ ಮಾಡಬಾರದಿತ್ತು
ಡಿಕೆಶಿ ಕಾಲಿಗೆ ಬೀಳುವುದಾಗಿ ಮುನಿರತ್ನ ಅವರು ನಿನ್ನೆಯೇ ಹೇಳಿಕೆ ನೀಡಿದ್ದರು. ಕ್ಷೇತ್ರದ ಜನರಿಗಾಗಿ ಕಾಲಿಗೆ ಬಿದ್ದು ಮನವಿ ಮಾಡುತ್ತೇನೆ ಎಂದಿದ್ದರು. ಹೇಳಿದಂತೆಯೇ ಇಂದು ಮುನಿರತ್ನ ಡಿಕೆಶಿ ಕಾಲಿಗೆ ಬಿದ್ದರು. ಬಳಿಕ ಮಾತನಾಡಿದ ಮುನಿರತ್ನ, ಕಾಲಿಗೆ ಬಿದ್ದು ಮನವಿ ಪತ್ರ ಸಲ್ಲಿಸಿದ್ದೇನೆ. ಡಿಕೆಶಿ ಕರೆದು ಮಾತನಾಡುತ್ತೇನೆ ಎಂದಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಡಿಕೆಶಿ ಮಾತನಾಡಿ, ಇಲ್ಲಿಗೆ ಬಂದು ಸೀನ್ ಕ್ರಿಯೆಟ್ ಮಾಡಬಾರದಿತ್ತು. ಮುನಿರತ್ನ ಅವರ ಮನವಿಯನ್ನು ಸ್ವೀಕಾರ ಮಾಡಿದ್ದೇನೆ ಮತ್ತು ಅವರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಆಡಳಿತದಲ್ಲಿ ಕೆಲಸ ಮಾಡುವುದು ಕಷ್ಟ
ಡಿಕೆಶಿಗೆ ಮನವಿ ಮಾಡುವ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ್ದ ಮುನಿರತ್ನ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಪೊಲೀಸ್ ದೌರ್ಜನ್ಯಗಳು ನಡೆಯುತ್ತಿವೆ ಮತ್ತು ಕಾಂಗ್ರೆಸ್ ಬೆಂಬಲಿಗರು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಆರ್ಆರ್ ಕ್ಷೇತ್ರದ ಎಲ್ಲ ವಿಚಾರದಲ್ಲೂ ಡಿಕೆಶಿ ಮಧ್ಯ ಪ್ರವೇಶಿಸುತ್ತಿದ್ದಾರೆ. ತಮ್ಮ ಸಹೋದರ ಡಿ.ಕೆ.ಸುರೇಶ್ ಸಂಸದರಾಗಿರುವ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವುದೇ ಡಿಕೆಶಿ ಉದ್ದೇಶವಾಗಿದೆ. ಹೀಗಾಗಿ ಅನುದಾನ ತಡೆ ಹಿಡಿದಿದ್ದಾರೆ. ಎಲ್ಲಾ ಶಾಸಕರನ್ನು ನೋಡುವಂತೆಯೇ ನಮ್ಮನ್ನೂ ನೋಡಿ ಎಂದು ಮುನಿರತ್ನ ಮನವಿ ಮಾಡಿದ್ದಾರೆ.
ಮುನಿರತ್ನ ಅವರು ನಡೆಸಿದ ಧರಣಿಗೆ ಬಿಬಿಎಂಪಿ ಮಾಜಿ ಮೇಯರ್ ನಾರಾಯಣಸ್ವಾಮಿ, ಪಾಲಿಕೆ ಸದಸ್ಯ ಜಿ.ಕೆ. ವೆಂಕಟೇಶ್ ಭಾಗಿಯಾಗಿದ್ದರು. ಅವರೆಲ್ಲರನ್ನೂ ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
20 ವರ್ಷಗಳ ನಂತರ ತೆರೆಯ ಮೇಲೆ ಮಿಂಚಲಿರುವ ಅಕ್ಷಯ್-ರವೀನಾ; ಸಂದರ್ಶಕಿ ಕೇಳಿದ ಪ್ರಶ್ನೆಗೆ ನಾಚಿ ನೀರಾದ ‘ಖಿಲಾಡಿ’