ಚಿಕ್ಕಮಗಳೂರು: ಅಯ್ಯಪ್ಪ ನಗರದಲ್ಲಿ ಯಗಚಿ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದ ಶಾಲಾ ಕಟ್ಟಡವನ್ನು ಪೊಲೀಸ್ ಭದ್ರತೆಯಲ್ಲಿ ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಜೆಸಿಬಿಯಿಂದ ತೆರವುಗೊಳಿಸಿದರು.
ಶನಿವಾರ ಬೆಳಗ್ಗೆ ಸ್ಥಳಕ್ಕೆ ತೆರಳಿದ ಪೊಲೀಸ್ ಮತ್ತು ನಗರಸಭೆ ಅಧಿಕಾರಿಗಳು, ರಾಜಕಾಲುವೆ ಒತ್ತುವರಿ ಮಾಡಿರುವುದನ್ನು ತೆರವು ಮಾಡಲು ಬಂದಿದ್ದೇವೆ ಎಂದು ಕಟ್ಟಡ ಮಾಲೀಕ ನವಾಬ್ಜಾನ್ ಅವರಿಗೆ ಮಾಹಿತಿ ನೀಡಿದಾಗ ವಿರೋಧಿಸಿದರಾದರೂ ನಂತರ ವಿಧಿ ಇಲ್ಲದೆ ಮೌನವಾದರು. ಅಕ್ರಮವಾಗಿ ಕಟ್ಟಡ ತೆರವುಗೊಳಿಸುವಂತೆ ನವೆಂಬರ್ನಲ್ಲಿ ನೋಟಿಸ್ ಜಾರಿ ಮಾಡಿದ್ದರೂ ತೆರವು ಮಾಡಿರಲಿಲ್ಲ. ನಾಲ್ಕು ಗುಂಟೆ ಜಾಗ ಒತ್ತುವರಿ ಮಾಡಿ ಎರಡು ವರ್ಷದ ಹಿಂದೆ ಮೂರು ಕೊಠಡಿಗಳನ್ನು ಕಟ್ಟಿ ಶಾಲೆ ನಡೆಸಲು ಮುಂದಾಗಿದ್ದರು.
ಕೋರ್ಟ್ ಆದೇಶ ಪಾಲನೆ: ಅಯ್ಯಪ್ಪ ನಗರದಲ್ಲಿ ಯಗಚಿ ರಾಜಕಾಲುವೆ ಒತ್ತುವರಿ ಮಾಡಿ ಶಾಲಾ ಕಟ್ಟಡ ಕಟ್ಟಿದ್ದರು. ನವೆಂಬರ್ನಲ್ಲಿ ನೋಟಿಸ್ ಜಾರಿ ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ನವಾಬ್ಜಾನ್ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ನಲ್ಲಿ ಇತ್ಯರ್ಥಪಡಿಸಿದ ಬಳಿಕ ನಗರಸಭೆ ಆಡಳಿತ ಮಂಡಳಿ ಮುಂದೆ ಮೇಲ್ಮನವಿ ಸಲ್ಲಿಸಲು 3 ತಿಂಗಳು ಕಾಲಾವಕಾಶ ನೀಡಿತ್ತು. ಚುನಾಯಿತ ಮಂಡಳಿ ಮುಂದೆ ಅವರು ಹೋಗದ ಕಾರಣ ಅವಧಿ ಪೂರ್ಣಗೊಂಡಿದ್ದರಿಂದ ಕಟ್ಟಡ ತೆರವು ಮಾಡಲಾಗಿದೆ ಎಂದು ಪೌರಾಯುಕ್ತ ಬಿ.ಎನ್.ಚಂದ್ರಶೇಖರ್ ತಿಳಿಸಿದರು. ಇನ್ನು ಒತ್ತುವರಿ ಜಾಗ ಗುರುತು ಮಾಡಿ ಅವರ ಜಾಗದ ಗೋಡೆಗೆ ಹೊಂದಿಕೊಂಡಿರುವುದನ್ನು ಅವರೇ ತೆರವುಗೊಳಿಸಿಕೊಳ್ಳಲು 10 ದಿನ ಕಾಲಾವಕಾಶ ನೀಡಲಾಗಿದೆ. ತೆರವುಗೊಳಿಸದಿದ್ದಲ್ಲಿ ನಗರಸಭೆಯಿಂದಲೇ ತೆರವು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.