More

    ಮುನವಳ್ಳಿ ಪಿಎಚ್‌ಸಿ ಶೀಘ್ರ ಮೇಲ್ದರ್ಜೆಗೆ

    ಮುನವಳ್ಳಿ: ಮೂಲಭೂತ ಸೌಕರ್ಯ ಕಲ್ಪಿಸುವ ಜತೆ ಪಟ್ಟಣದ ಅಭಿವೃದ್ಧಿಗೆ ಸದಾಬದ್ಧ. ಮುನವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

    ಪಟ್ಟಣದ ಶ್ರೀ ಸೋಮಶೇಖರಮಠದ ಲಿಂ. ಶ್ರೀ ಬಸವಲಿಂಗ ಶ್ರೀಗಳ 68ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಆರಂಭಗೊಂಡಿರುವ ಆಧ್ಯಾತ್ಮಿಕ ಪ್ರವಚನ ಸೇರಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

    ಶ್ರೀ ಸೋಮಶೇಖರಮಠದ ಮುರುಘೇಂದ್ರ ಶ್ರೀಗಳು ನಮ್ಮ ಭಾಗದಲ್ಲಿ 25 ವರ್ಷಗಳಿಂದ ಧರ್ಮ ಜಾಗೃತಿ ಜತೆ ತ್ರಿವಿಧ ದಾಸೋಹ ಹಮ್ಮಿಕೊಂಡು ಸಮಾಜ ಕಟ್ಟುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

    ಪ್ರವಚನಕಾರ ತಾರಿಹಾಳದ ಶ್ರೀ ಅಡವಿಸಿದ್ದೇಶ್ವರ ದೇವರು ಮಾತನಾಡಿ, ಸಮಾಜದ ಆರ್ಥಿಕ ಹಾಗೂ ಶೈಕ್ಷಣಿಕ ಒಳಿತಿಗಾಗಿ ಹಾನಗಲ್ ಶ್ರೀ ಕುಮಾರೇಶ್ವರ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಮಾರ್ಗದರ್ಶನದಲ್ಲಿ ಎಲ್ಲ ಆಸ್ತಿ ದಾನ ಮಾಡಿದ ಶಿರಸಂಗಿ ಲಿಂಗರಾಜ ದೇಸಾಯಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಸ್ಮರಣೀಯ ಎಂದರು.
    ಅತಿಥಿಗಳಾಗಿ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ ಹಾಗೂ ಸಹಕಾರಿ ಧುರೀಣ ಉಮೇಶ ಬಾಳಿ ಮಾತನಾಡಿ, ಪರೋಪಕಾರಿ ಹಾಗೂ ದಾರ್ಶನಿಕರಾಗಿದ್ದ ಲಿಂಗರಾಜ ದೇಸಾಯಿ ಅವರು ತಮ್ಮ ಆಸ್ತಿಯನ್ನು ಸಮಾಜಕ್ಕೆ ತ್ಯಾಗ ಮಾಡುವ ಮೂಲಕ ಸಾಮಾಜಿಕ ಬದಲಾವಣೆ ಮತ್ತು ಏಳಿಗೆಗೆ ಕಾರಣೀಭೂತರಾದವರು ಎಂದರು.

    ಸಾನ್ನಿಧ್ಯ ವಹಿಸಿದ್ದ ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಮಾತನಾಡಿ, 12ನೇ ಶತಮಾನದ ಸಮಾಜ ಸುಧಾರಣೆಯ ನಂತರ 18ನೇ ಶತಮಾನದಲ್ಲಿ ಉತ್ತರ ಕರ್ನಾಟಕದ ಮಹತ್ವದ ಬೆಳವಣಿಗೆಯಲ್ಲಿ ಶಿರಸಂಗಿ ಲಿಂಗರಾಜರ ಕೊಡುಗೆ ಅಪಾರವಾಗಿದೆ ಎಂದರು. ಸವದತ್ತಿ ಬೆಟಸೂರಮಠದ ಅಜ್ಜಯ್ಯ ಶ್ರೀಗಳಿಗೆ ಸನ್ಮಾನಿಸಲಾಯಿತು. ಶ್ರೀ ಸಂಗನಬಸವದೇವರು, ಪುರಸಭೆ ಸದಸ್ಯ ಸಿ.ಬಿ.ಬಾಳಿ, ಎಪಿಎಂಸಿ ಅಧ್ಯಕ್ಷ ಚಂದ್ರು ಪೂಜೇರ, ಶಿಂದೋಗಿ ಗ್ರಾಪಂ ಅಧ್ಯಕ್ಷ ಡಿ.ಡಿ.ಟೋಪೋಜಿ, ತೆಗ್ಗಿಹಾಳ ಗ್ರಾಪಂ ಅಧ್ಯಕ್ಷ ಹಣಮಂತ ಸಿಂಗಣ್ಣವರ ಅವರನ್ನು ಸನ್ಮಾನಿಸಲಾಯಿತು.

    ಮುರುಘೇಂದ್ರ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಬಿ.ಬಿ.ಹುಲಿಗೊಪ್ಪ ಸ್ವಾಗತಿಸಿದರು. ಗಂಗಾಧರ ಗೊರಾಬಾಳ ನಿರೂಪಿಸಿದರು. ದೇವರಾಜ ಯರಕಿಹಾಳ, ಹನುಮಂತ ಅಂಕದ ಅವರಿಂದ ಸಂಗೀತ ಸೇವೆ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts