ದಾವಣಗೆರೆ: ರಾಜ್ಯ ಸರ್ಕಾರ ತೆಂಗು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ತೆಂಗು ಬೆಳೆಗಾರರಿಗೆ ಗುತ್ತಿಗೆದಾರರು ಕಳಪೆ ಕ್ರಿಮಿನಾಶಕ, ಬೇವಿನ ಇಂಡಿ, ಗೊಬ್ಬರ ಪೂರೈಸಿದಲ್ಲಿ ಅಂಥವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಕೆ ನೀಡಿದರು.
ದಾವಣಗೆರೆಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ, 2023-24ನೇ ಸಾಲಿನ ತೆಂಗು ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಕುರಿತು ಆಯೋಜಿಸಿದ್ದ ತರಬೇತಿ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಹೆಚ್ಚಿನ ಇಳುವರಿ ಬರಲೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ತೆಂಗು ಬೆಳೆಯುವ ರೈತರ ಒಂದು ಎಕರೆಗೆ 17 ಸಾವಿರ ರೂ. ವೆಚ್ಚದ ಕ್ರಿಮಿನಾಶಕ, ಬೇವಿನ ಇಂಡಿ, ಗೊಬ್ಬರ ಪೂರೈಸಲು ಗುತ್ತಿಗೆ ನೀಡಿದೆ ಎಂದರು.
ಗುತ್ತಿಗೆದಾರರು ಕಳಪೆ ಬೇವಿನ ಇಂಡಿ, ರಸಗೊಬ್ಬರ, ಕ್ರಿಮಿನಾಶಕ ಪೂರೈಸಬಾರದು. ಈ ಹಿಂದೆ ರೈತರಿಂದ ಇದರ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಗುತ್ತಿಗೆದಾರರು ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕಿವಿಮಾತು ಹೇಳಿದರು.
ತೆಂಗು ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸದೃಢವಾಗಬಹುದು. ಜಮೀನಿನ ಬದು ಅಥವಾ ಒಂದೆರಡು ಎಕರೆ ಜಮೀನುಗಳಲ್ಲಿ ಅಕ್ಕಡಿ ರೂಪವಾಗಿ ತೆಂಗು ಬೆಳೆದರೆ ಲಾಭ ಪಡೆಯಬಹುದು. ಈ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಅರ್ಹ ರೈತರಿಗೆ ಬೇವಿನ ಇಂಡಿ, ಮೈಕ್ರೋ ಗೊಬ್ಬರ, ಕ್ರಿಮಿನಾಶಕ ವಿತರಿಸಲಾಯಿತು. ಈ ವೇಳೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಷ್ಮಾ ಪರ್ವೀನ್, ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ರೈತರಿದ್ದರು