ನವದೆಹಲಿ: ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾತನಾಡಿದ ಬೆನ್ನಲ್ಲೇ ಶಿವಸೇನೆ ನೇತೃತ್ವದ ಸರ್ಕಾರ ಮುಂಬೈನಲ್ಲಿರುವ ಕಂಗನಾ ರಣಾವತ್ ಕಚೇರಿಯನ್ನು ಹೊಡೆದುರುಳಿಸುತ್ತಿದೆ. ಇದರ ಬೆನ್ನಲ್ಲೇ ಟ್ವಿಟರ್ನಲ್ಲಿ ಆಕ್ರೋಶದ ಸುರಿಮಳೆಯಾಗುತ್ತಿದ್ದು, ಅನೇಕ ನೆಟ್ಟಿಗರು ಕಂಗನಾ ಬೆಂಬಲಿಸಿ, ಸರ್ಕಾರದ ಕ್ರಮವನ್ನು ಟೀಕಿಸುತ್ತಿದ್ದಾರೆ.
ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ನೆಟ್ಟಿಗರು ಖಂಡಿಸಿದ್ದಾರೆ. ಒಂದೆಡೆ ಸರ್ಕಾರ ಕಂಗನಾ ಕಚೇರಿಯನ್ನು ಕೆಡವುತ್ತಿದ್ದರೆ, ಮತ್ತೊಂದೆಡೆ ಜಾಲತಾಣದಲ್ಲಿ #DeathOfDemocracy (ಪ್ರಜಾಪ್ರಭುತ್ವದ ಸಾವು), #KanganaRanaut #ISupportKanganaRanaut (ನಾನು ಕಂಗಾನರನ್ನು ಬೆಂಬಲಿಸುತ್ತೇನೆ) ಮತ್ತು #ShameOnBMC (ಮುಂಬೈ ಮಹಾನಗರ ಪಾಲಿಕೆಗೆ ನಾಚಿಕೆಯಾಗಬೇಕು) ಹ್ಯಾಶ್ಟ್ಯಾಗ್ಗಳ ಟ್ರೆಂಡಿಂಗ್ನಲ್ಲಿವೆ.
ವಿವಿಧ ಮೀಮ್ಗಳ ಮೂಲಕ ಸರ್ಕಾರದ ಕ್ರಮವನ್ನು ಜಾಲತಾಣಿಗರು ಟೀಕಿಸುತ್ತಿದ್ದಾರೆ. ಹೆಣ್ಣು ಮಗಳ ವಿರುದ್ಧ ಒಂದು ಸರ್ಕಾರವೇ ನಿಂತಿದೆ. ನಿಮಗೆ ನಾಚಿಕೆಯಾಗಬೇಕು. ಹೋಗಿ ಬಳೆ ತೊಟ್ಟಿಕೊಳ್ಳಿ ಎಂಬಂತೆ ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾದ ಪ್ರಖ್ಯಾತ ಕಿರುತೆರೆ ನಟಿ: ಬಯಲಾಯ್ತು ಟಿಕ್ಟಾಕ್ ಗೆಳೆಯನ ಕರಾಳ ಮುಖ?!
ಸೋಮವಾರವಷ್ಟೇ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಬಾಂದ್ರಾದ ಪಾಲಿ ಹಿಲ್ನಲ್ಲಿರುವ ಕಂಗನಾ ಅವರ ಕಚೇರಿಗೆ ಭೇಟಿ ನೀಡಿ, ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸೀಲ್ ಮಾಡಿದ್ದರು. ಅಲ್ಲದೆ, ಪರಿಶೀಲನೆ ಬಳಿಕ 14 ನಿಯಮ ಉಲ್ಲಂಘನೆಗಳ ಪಟ್ಟಿ ಸಹ ಮಾಡಿದ್ದರು. ನೆಲಸಮ ಮಾಡುವುದಾಗಿಯೂ ನೋಟಿಸ್ ಸಹ ಹೊರಡಿಸಿದ್ದರು. ಅದರಂತೆ ಅವರ ಕಚೇರಿಯನ್ನು ಇಂದು ಮಹಾ ಸರ್ಕಾರ ಹೊಡೆದುರುಳಿಸುತ್ತಿದೆ.
ಸೋಮವಾರ ನೀಡಿದ್ದ ನೋಟೀಸ್ನಲ್ಲಿ ಹೇಗೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನಮೂದಿಸಲಾಗಿತ್ತು. ಅಷ್ಟೇ ಅಲ್ಲ, 24 ಗಂಟೆಗಳಲ್ಲಿ ಈ ನೋಟೀಸ್ಗೆ ಉತ್ತರ ಕೊಡದಿದ್ದ ಪಕ್ಷದಲ್ಲಿ, ಅತಿಕ್ರಮವಾಗಿ ನಿರ್ಮಿಸಲಾದ ಭಾಗವನ್ನು ಒಡೆಯುವುದಾಗಿ ಈ ನೋಟೀಸ್ನಲ್ಲಿ ಹೇಳಲಾಗಿತ್ತು.
ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಈ ನಿರ್ಣಯವನ್ನು ಖಂಡಿಸಿರುವ ಕಂಗನಾ, ತಮ್ಮ ಟ್ವಿಟರ್ ಅಕೌಂಟ್ ಮೂಲಕ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಮುಂಬೈ ಆಫೀಸ್ ತೋರಿಸಿರುವ ಅವರು, ತಮ್ಮ ಕನಸೊಂದನ್ನು ಅಧಿಕಾರಿಗಳು ನುಚ್ಚುನೂರು ಮಾಡುತ್ತಿರುವುದಾಗಿ ಆರೋಪಿಸಿದ್ದರು.
ಇದನ್ನೂ ಓದಿ: ಒಂದೇ ಕೊಠಡಿಯಲ್ಲಿ ಮಾದಕ ನಟಿಯರು: ಸಣ್ಣ ವಿಚಾರಕ್ಕೆ ಕಿತ್ತಾಡಿಕೊಂಡ ಸಂಜನಾ-ರಾಗಿಣಿ?!
‘ಇದು ನನ್ನ ‘ಮಣಿಕರ್ಣಿಕಾ’ ಆಫೀಸ್. ಈ ಆಫೀಸ್ ಸ್ಥಾಪಿಸುವುದಕ್ಕೆ ನನ್ನ 15 ವರ್ಷಗಳ ಪರಿಶ್ರಮವಿದೆ. ನನ್ನದೇ ಸ್ವಂತದ್ದೊಂದು ಆಫೀಸ್ ಮಾಡಿಕೊಳ್ಳಬೇಕೆಂಬ ಕನಸು ಬಹಳ ವರ್ಷಗಳಿಂದ ಇತ್ತು. ಆ ಕನಸನ್ನು ನುಚ್ಚುನೂರು ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದರು.
ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದೇ ಕಂಗನಾಗೆ ಮುಳುವಾಗಿದೆ. ಈ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸಹ ಕಿಡಿಕಾರಿ, ಮುಂಬೈನಲ್ಲೇ ಜೀವನ ಕಟ್ಟಿಕೊಂಡು ಇದೀಗ ಮುಂಬೈ ಮೇಲೆ ಕೃತಜ್ಞತಾ ಭಾವ ಇಲ್ಲದಿರುವುದು ಸರಿಯಲ್ಲ ಎಂದು ಜರಿದಿದ್ದಾರೆ. (ಏಜೆನ್ಸೀಸ್)