ಶಿವಮೊಗ್ಗ: ತ್ಯಾವರೆಕೊಪ್ಪ ಸಫಾರಿಯ ಹಿರಿಯ ಹುಲಿ ವಾಲಿ(18) ಶನಿವಾರ ಮೃತಪಟ್ಟಿದೆ. ಕೆಲ ತಿಂಗಳಿನಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ವಾಲಿ, ಇತ್ತೀಚೆಗೆ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿತ್ತು. ಸತತ ಚಿಕಿತ್ಸೆ ಬಳಿಕವೂ ಚೇತರಿಕೆ ಕಾಣದೇ ಕೊನೆಯುಸಿರೆಳೆದಿದೆ.
ಕಳೆದ ತಿಂಗಳಷ್ಟೇ ಮತ್ತೊಂದು ಹಿರಿಯ ಹುಲಿ ಭರತ (16) ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಒಂದು ತಿಂಗಳಲ್ಲೇ ಎರಡು ಹುಲಿಗಳು ಸಾವು ಕಂಡಿರುವುದು ಸಫಾರಿ ಸಿಬ್ಬಂದಿಯಲ್ಲಿ ಬೇಸರ ಮೂಡಿಸಿದೆ. ಕಾಡಿನಲ್ಲಿ ಗರಿಷ್ಠ 13 ವರ್ಷ ಜೀವಿಸುವ ಹುಲಿಗಳು, ಸಫಾರಿಯಲ್ಲಿ 16 ರಿಂದ 19 ವರ್ಷದವರೆಗೂ ಬದುಕುಬಲ್ಲವು ಎನ್ನುತ್ತಾರೆ ಸಫಾರಿ ಅಧಿಕಾರಿ.
ವಾಲಿ ಬಹುತೇಕ ನಿತ್ರಾಣಗೊಂಡಿದ್ದ ಕಾರಣ ಕಳೆದೊಂದು ವರ್ಷದಿಂದ ಕ್ರಾಲ್ನಲ್ಲಿ ಇರುತ್ತಿತ್ತು. ಡೇ ಕ್ರಾಲ್ನಲ್ಲಷ್ಟೇ ಅದನ್ನು ನೋಡುವ ಭಾಗ್ಯ ಪ್ರವಾಸಿಗರಿಗೆ ಸಿಗುತ್ತಿತ್ತು. ಚಿಕಿತ್ಸೆ ಬಳಿಕ ಕೆಲ ದಿನ ಚೇತರಿಕೆ ಕಾಣುತ್ತಿದ್ದ ವಾಲಿ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಿತ್ತು. ವಾಲಿ ಹಾಗೂ ಭರತ ಇಬ್ಬರನ್ನೂ ಮೈಸೂರು ಮೃಗಾಲಯದ ಹೆಚ್ಚುವರಿ ನಿಗಾ ಕೇಂದ್ರಕ್ಕೆ ಕಳುಹಿಸಬೇಕೆಂದು ಸಫಾರಿ ಅಧಿಕಾರಿಗಳು ನಿರ್ಧರಿಸಿದ್ದರು. ಆದರೆ ಅಷ್ಟರಲ್ಲೇ ಎರಡೂ ಹುಲಿಗಳು ಸಾವು ಕಂಡಿವೆ.
ಮರಣೋತ್ತರ ಪರೀಕ್ಷೆ: ಸಿಸಿಎಫ್ ರವಿಶಂಕರ್, ವನ್ಯಜೀವಿ ವಿಭಾಗದ ಡಿಸಿಎಫ್ ಐ.ಎಂ.ನಾಗರಾಜ್, ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ್ಚಂದ್ರ ಸಮ್ಮುಖದಲ್ಲಿ ವನ್ಯಜೀವಿ ವಿಭಾಗದ ವೈದ್ಯ ಡಾ.ವಿನಯ್, ಪಶುವೈದ್ಯಕೀಯ ಕಾಲೇಜಿನ ಪ್ರೊ. ಜಯರಾಂ ನೇತೃತ್ವದಲ್ಲಿ ವಾಲಿಯ ಮಣೋತ್ತರ ಪರೀಕ್ಷೆ ನಡೆಸಿ ಅಂತಿಮ ವಿಧಾನ ಪೂರೈಸಲಾಯಿತು.