ಮೊಳಕಾಲ್ಮೂರು: ಬಹುಭಾಷೆಗಳ ಪ್ರಭಾವದಲ್ಲೂ ಕನ್ನಡ ತನ್ನದೇ ಆದ ಪ್ರಾಶಸ್ತ್ಯ ಹೊಂದಿದೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡದ ಸಾರ್ವಭೌಮತ್ವ ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಬೇಕು ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಬಿ.ಜಿ.ಕೆರೆ ಸುಮಂಗಲಮ್ಮ ಮಾತನಾಡಿ, ಭಾರತದ ಅನೇಕ ಭಾಷೆಗಳಲ್ಲಿ ಕನ್ನಡ ಮೇರುಸ್ಥಾನದಲ್ಲಿ ನಿಂತು ತನ್ನ ಸಾಹಿತ್ಯ, ಕಲೆ ಮತ್ತಿತರ ಶ್ರೀಮಂತಿಕೆಯನ್ನು ಎತ್ತಿ ಹಿಡಿದಿದೆ ಎಂದರು.
ಸಿಪಿಐ ಜೆ.ಬಿ.ಉಮೇಶ ನಾಯಕ ಮಾತನಾಡಿ, ರಾಜ್ಯದ ಅಂಗನವಾಡಿ, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಿದ್ದರಿಂದ ಯುವಸಮೂಹ ನಾಲಿಗೆ ಮೇಲೆ ಕನ್ನಡ ನಲಿಯುತ್ತಿದೆ ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಪೂರೈಸಬೇಕು. ಕಳಸಾ-ಬಂಡೂರಿ, ಮೇಕೆದಾಟು, ಕಾವೇರಿ ವಿವಾದಗಳನ್ನು ಶೀಘ್ರ ಕಾನೂನಾತ್ಮಕವಾಗಿ ಇತ್ಯರ್ಥಪಡಿಸಿ ಸಮಗ್ರ ಕರ್ನಾಟಕವನ್ನು ನೀರಾವರಿ ಪ್ರದೇಶವನ್ನಾಗಿ ಮಾಡಿ ರೈತರಿಗೆ ಶಕ್ತಿ ತುಂಬಬೇಕಿದೆ ಎಂದರು.
ಟಿಎಚ್ಒ ಡಾ.ಸುಧಾ, ಸಿಡಿಪಿಒ ಸವಿತಾ, ಪಿಎಸ್ಐ ಬಸವರಾಜ್, ಬಿಇಒ ಯುವರಾಜ್ ನಾಯ್ಕ, ಬಿಆರ್ಸಿ ಹನುಮಂತಪ್ಪ, ಕನ್ನಡ ಪರ ಸಂಘಟನೆ ಅಧ್ಯಕ್ಷರಾದ ಎಂ.ಜಾಫರ್, ಡಿ.ಒ.ಮುರಾರ್ಜಿ, ಎಸ್.ನಾಗರಾಜ್, ಶ್ರೀರಾಮುಲು, ಅಧಿಕಾರಿಗಳಾದ ಶಿವಪ್ರಸಾದ್, ಪ್ರಾಣೇಶ್, ವಾಲೇಕರ್, ಏಳುಕೋಟಿ, ರಂಗಸ್ವಾಮಿ, ಶಿಕ್ಷಕ ಓಬಣ್ಣ ಇತರರಿದ್ದರು.