ಬೆಂಗಳೂರು: ಕಂಪ್ಯೂಟರ್ ಸಾಕ್ಷರತೆ ಇಂದಿನ ಅಗತ್ಯವಾಗಿದ್ದು, ಜಾಗತಿಕ ಜಗತ್ತಿನಲ್ಲಿ ಪ್ರಚಲಿತ ಬೆಳವಣಿಗೆ ತಿಳಿಯಲು ಗಣಕದ ಅರಿವು ಅನಿವಾರ್ಯವಾಗಿದೆ. ಹಾಗಾಗಿ ಗಣಕದಲ್ಲಿ ಕನ್ನಡ ಬಳಕೆ ವ್ಯಾಪಕವಾಗಬೇಕಿದೆ ಎಂದು ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ ಅಭಿಪ್ರಾಯಪಟ್ಟರು.
ಎಚ್.ಎ.ಎಲ್.ಕೇಂದ್ರೀಯ ಕನ್ನಡ ಸಂಘವು ಆಯೋಜಿಸಿದ್ದ ‘ಗಣಕದಲ್ಲಿ ಕನ್ನಡ ತಂತ್ರಾಂಶ ಕಲಿಕಾ ತರಗತಿ ’ಉದ್ಘಾಟನೆ ಹಾಗೂ ‘ಮತ್ತು ಮಾಸದ ಮಾತು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಅನಿವಾರ್ಯತೆ ಅರಿತು ಗಣಕದಲ್ಲಿ ಕನ್ನಡ ತಂತ್ರಾಂಶ ಕಲಿಕೆಯ ಕೋರ್ಸ್ ಆರಂಭಿಸಿರುವ ಸಂಘದ ಕಾರ್ಯವನ್ನು ಶ್ಲಾಸಿದ ಅವರು, ಇಂದು ವಿಜ್ಞಾನ-ತಂತ್ರಜ್ಞಾನದ ಜ್ಞಾನವೂ ಸೇರಿ ಎಲ್ಲ ವಿಷಯಗಳು ಕನ್ನಡದಲ್ಲಿ ಸಿಗುವಂತಾದರೆ ಕನ್ನಡ ಅನ್ನದ ಭಾಷೆಯಾಗುತ್ತದೆ. ಆ ನಿಟ್ಟಿನಲ್ಲಿ ಜಗತ್ತಿನ ಜ್ಞಾನಗಳಿಗೆ ಕಿಂಡಿಯಾಗಿರುವ ಗಣಕದ ಅರಿವು ಮೂಡಿಸುವ ಈ ಕೆಲಸ ಮೊದಲ ಹೆಜ್ಜೆಯಾಗಿದೆ ಎಂದರು.
ತಂತ್ರಜ್ಞಾನವನ್ನು ಭಾಷೆಯೊಡನೆ ಸಂವಹಿಸದಾಗ ಆ ಭಾಷೆಯು ಹೆಚ್ಚು ಪ್ರಸ್ತುತವಾಗುತ್ತದೆ. ಗಣಕದಲ್ಲಿ ಕನ್ನಡ ಕಲಿಕೆಯಿಂದ ನಮ್ಮ ಜ್ಞಾನವಷ್ಟೇ ವೃದ್ಧಿಸುವುದಿಲ್ಲ, ನಮ್ಮ ಆತ್ಮವಿಶ್ವಾಸ ಹೆಚ್ಚಿ ಸ್ವಾಭಿಮಾನವೂ ಜಾಗೃತವಾಗುತ್ತದೆ ಎಂದು ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್. ನರಸಿಂಹಮೂರ್ತಿ ಹೇಳಿದರು.
ಮಾನವ ಸಂಪನ್ಮೂಲ ಇಲಾಖೆ ಮಹಾವ್ಯವಸ್ಥಾಪಕ ಎಂ.ಜಿ. ಬಾಲಸುಬ್ರಮಣ್ಯ, ಎಚ್.ಎ.ಎಲ್. ಕಾರ್ಮಿಕ ಸಂಘದ ಅಧ್ಯಕ್ಷ ಮಹೇಶ್ ಅಂಗಡಿ, ಕಾರ್ಯದರ್ಶಿ ಕೆ.ಡಿ. ದೇವರಾಜ್, ಕರ್ನಾಟಕ ಕಾರ್ಮಿಕಲೋಕದ ಬಿ.ವಿ.ರವಿಕುಮರ್, ಡಾ. ವಿ. ಸಂಧ್ಯಾ, ಕಾರ್ಖಾನೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.