ಮುದಗಲ್: ಪಟ್ಟಣದ ಮೇಗಳಪೇಟೆಯ ಸರ್ಕಾರಿ ಗೈರಾಣಿ ಭೂಮಿ ಅಕ್ರಮ ಹಂಚಿಕೆ ಪ್ರಕರಣ ಬಯಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದು ಭೂ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸರ್ಕಾರಕ್ಕೆ ವರದಿ ಕಳಿಸಲಾಗುವುದೆಂದು ಜಿಲ್ಲಾ ನಗರಾಭಿವೃದ್ಧಿ ಕೋಶಾ ಯೋಜನಾ ನಿರ್ದೇಶಕ ಮಹೇಂದ್ರಕುಮಾರ ತಿಳಿಸಿದರು.
ಪುರಸಭೆಯಲ್ಲಿ ಸರ್ಕಾರಿ ಜಮಿನುದಲ್ಲಿ ಖಾತಾ ನಕಲು ನೀಡಿದ ಭೂ ಹಗರಣ ಪ್ರಕರಣಕ್ಕೆ ಸಂಬಂದಿಸಿ ಗುರುವಾರ ತನಿಖೆ ಕುರಿತು ಕೆಲ ದಾಖಲೆ ಮತ್ತು ಸ್ಥಳ ಪರಿಶಿಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರಿ ಗೈರಾಣಿ ಜಮೀನು ಆಗಿರುವ ಸ.ನಂ.593ರಲ್ಲಿ 65.31 ಎಕರೆ ಭೂಮಿ ಕಂದಾಯ ಇಲಾಖೆ ವ್ಯಾಪ್ತಿಗೊಳಪಟ್ಟಿದೆ. ಆದರೂ ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ, ಸಿಬ್ಬಂದಿ ನಿಸಾರ್ ಅಲಿ ಸೇರಿ ಇತರರು ಇದೇ ಭೂಮಿಯಲ್ಲಿ ಆಸ್ತಿಯ ಖಾತಾ ನಕಲು ತಯಾರಿಸಿ ವಿತರಿಸಿದ್ದಾರೆ.
ಈಗಾಗಲೆ ತಾಲೂಕು ನೋಂದಣಿ ಕೇಂದ್ರದಲ್ಲಿ 12 ಜನರ ಹೆಸರಿನಲ್ಲಿ ತಲಾ 1200 ಚದರ ಅಡಿಯಂತೆ ನೋಂದಣಿ ಆಗಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಅಲ್ಲದೆ ಇತರ ಸರ್ಕಾರಿ ಜಾಗ ಕೂಡ ಕೆಲವರಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಟ್ಟಿರುವ ದೂರುಗಳು ಬಂದಿವೆ. ಈ ಬಗ್ಗೆ ಪರಿಶಿಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವದಕ್ಕೆ ಶಿಫಾರಸು ಮಾಡಲಾಗುವುದು ಎಂದರು.