ಮುದೇನೂರು: ತಾವರಗೇರಾ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಆದರೆ, ಜಮೀನಿನಲ್ಲಿ ಬೆಳೆದಿರುವ ಕಳೆ ಕೀಳಲು ಕೃಷಿ ಕೂಲಿ ಕಾರ್ಮಿಕರು ಸಿಗದೆ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ.
ತಿಂಗಳ ಹಿಂದೆ ಮಸಾರಿ ಭಾಗದಲ್ಲಿ ಅಲ್ಪ-ಸಲ್ಪ ನೀರಾವರಿ ಹೊಂದಿದ ರೈತರು ಶೇಂಗಾ ಬಿತ್ತನೆ ಮಾಡಿದ್ದಾರೆ. ಬೋರ್ವೆಲ್ ಹಾಗೂ ತುಂತುರು ನೀರಾವರಿ ಮೂಲಕ ಬೆಳೆಗೆ ನೀರು ಹರಿಸಿದ್ದಾರೆ. ಶೇಂಗಾ ಬಿತ್ತನೆ ಮಾಡಿದ್ದರಿಂದ ಕಳೆ ಕೀಳಲು ಸ್ಥಳೀಯವಾಗಿ ಕೂಲಿಕಾರರು ಸಿಗದ ಪರಿಣಾಮ ರೈತರು ನೆರೆಯ ಗ್ರಾಮಗಳಿಂದ ಕರೆ ತರುವ ಮೂಲಕ ಕೃಷಿ ಚಟುವಟಿಕೆಗೆ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.
ನರೇಗಾ, ಬೇರೆ ಊರುಗಳಿಗೆ ವಲಸೆ: ಹೊಮ್ಮಿನಾಳ, ಹೊನಗಡ್ಡಿ, ಲಿಂಗದಹಳ್ಳಿ, ವಿರುಪಾಪುರ, ಗುಡ್ಡದ ಹನುಮಸಾಗರ, ಜಿ.ಎಚ್.ಕ್ಯಾಂಪ್, ಬಚನಾಳ, ಹಡಗಲಿ, ಸಿದ್ದಾಪುರ, ಹಿರೇಮುಕರ್ತಿಹಾಳ, ಮೆಣೇಧಾಳ, ಹಿರೇ ತಮ್ಮಿನಾಳ, ಚಿಕ್ಕ ತಮ್ಮಿನಾಳ, ಎಸ್.ಗಂಗನಾಳ, ಮೆತ್ತಿನಾಳ, ಕನ್ನಾಳ, ಸಂಗನಾಳ, ಪುರ, ಹುಲಿಯಾಪುರದಲ್ಲಿ ಶೇಂಗಾ ನಳನಳಿಸುತ್ತಿವೆ. ಗ್ರಾಮೀಣ ಭಾಗದ ಕೆಲವೆಡೆ ಈಗಾಗಲೇ ನರೇಗಾ ಕೆಲಸ ಆರಂಭವಾದ ಹಿನ್ನೆಲೆಯಲ್ಲಿ ಕೂಲಿಕಾರರಿಗೆ ಬೇಡಿಕೆ ಹೆಚ್ಚಿದೆ. ಅಲ್ಲಿ 300 ರೂ. ಹೆಚ್ಚು ಕೂಲಿ ಸಿಗುತ್ತಿದೆ. ಅಲ್ಲದೆ ಬೇರೆ ಊರುಗಳಿಗೂ ಕೆಲ ಕುಟುಂಬಗಳು ವಲಸೆ ಹೋಗಿರುವುದರಿಂದ, ರೈತರ ಜಮೀನಿನತ್ತ ಯಾರೂ ಸುಳಿಯುತ್ತಿಲ್ಲ.
ಮಸಾರಿ ಭಾಗದಲ್ಲಿ ಹಿಂಗಾರಿನ ಬೆಳೆ ಶೇಂಗಾ ನಾಟಿ ಮಾಡಿದ್ದು, ಕಳೆ ಕೀಳಲು ಕೂಲಿಕಾರರು ಸಿಗದ ಕಾರಣ ಸಮಸ್ಯೆಯಾಗಿದೆ. ಸ್ವ-ಗ್ರಾಮದಲ್ಲಿ ಕೂಲಿ ಆಳುಗಳು ದೊರಕದ ಕಾರಣ ನೆರೆಯ ಹಳ್ಳಿಗಳಿಂದ ಕರೆಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
| ಶೇಖರಪ್ಪ, ಬಚನಾಳ ಗ್ರಾಮದ ರೈತ