ಮುದ್ದೇಬಿಹಾಳ: ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ತಾಲೂಕಿನ ಗಂಗೂರ ಗ್ರಾಮದ ದಲಿತ ಸಮಾಜದವರು ನಡೆಸುತ್ತಿದ್ದ ಸತ್ಯಾಗ್ರಹ ಅಧಿಕಾರಿಗಳ ಭರವಸೆ ಮೇರೆಗೆ ಮಂಗಳವಾರ ಅಂತ್ಯಗೊಂಡಿತು.ಧರಣಿ ಸ್ಥಳಕ್ಕೆ ಡಿವೈಎಸ್ಪಿ ಅರುಣಕುಮಾರ ಕೋಳೂರ, ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ಸಿಪಿಐ ಆನಂದ ವಾಘ್ಮೋಡೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ಪಿಎಸೈ ರೇಣುಕಾ ಜಕನೂರ ಭೇಟಿ ನೀಡಿದರು.
ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಮಾತನಾಡಿ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ದಲಿತ ಬಾಂಧವರಿಗೆ ಸ್ಮಶಾನ ಭೂಮಿ ಕೊಡಲು ಸದ್ಯಕ್ಕೆ ಅವರು ಬೇಡಿಕೆ ಇಟ್ಟಿರುವ ಜಾಗವನ್ನು ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಅದು ಸಾಧ್ಯವಾಗದಿದ್ದರೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.
ಮುಖಂಡ ಡಿ.ಬಿ.ಮುದೂರು ಹೋರಾಟದ ನೇತೃತ್ವ ವಹಿಸಿದ್ದರು. ಎಳೆನೀರು, ಕಬ್ಬಿನ ಜ್ಯೂಸ್ ನೀಡಿ ಹೋರಾಟಕ್ಕೆ ಅಂತ್ಯ ಹಾಡಲಾಯಿತು. ಮುಖಂಡರಾದ ಹರೀಶ ನಾಟೀಕಾರ, ತಿಪ್ಪಣ್ಣ ಮಾದರ, ಮಂಗಳಪ್ಪ ಮುದೂರ ಇತರರಿದ್ದರು.