ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡ (ಸಿಎಸ್ಕೆ)ದ ಮಾಜಿ ಬ್ಯಾಟ್ಸ್ಮನ್ ಸುಬ್ರಹ್ಮಣಿಯನ್ ಬದ್ರಿನಾಥ್ ಅವರು ಶಾಕಿಂಗ್ ವಿಚಾರವೊಂದನ್ನು ಇದೀಗ ತಿಳಿಸಿದ್ದಾರೆ.
ಚೆನ್ನೈ ಫ್ರಾಂಚೈಸಿಗೆ ಮಹೇಂದ್ರ ಸಿಂಗ್ ಧೋನಿಯವರನ್ನು ಸಿಎಸ್ಕೆ ತಂಡದ ನಾಯಕನನ್ನಾಗಿ ಮಾಡಲು ಇಷ್ಟವಿರಲಿಲ್ಲ. ಅವರ ಆಸಕ್ತಿ ಬೇರೆಯೇ ಇತ್ತು ಎಂದು ಹೇಳಿದ್ದಾರೆ.
ಬದ್ರಿನಾಥ್ ಅವರು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಮಾತನಾಡಿ, ಐಪಿಎಲ್ ಪ್ರಾರಂಭವಾದಾಗ, ನಾಯಕನ ಸ್ಥಾನಕ್ಕೆ ಚೆನ್ನೈ ಫ್ರಾಂಚೈಸಿಯ ಮೊದಲ ಆಯ್ಕೆ ಧೋನಿ ಆಗಿರಲಿಲ್ಲ. 2008ರಲ್ಲಿ ಐಪಿಎಲ್ ಶುರುವಾಗಿದೆ. ಆಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್ಮೆಂಟ್ ವೀರೇಂದ್ರ ಸೆಹ್ವಾಗ್ ಅವರನ್ನೇ ನಾಯಕನನ್ನಾಗಿ ನೇಮಕ ಮಾಡಲು ನಿರ್ಧರಿಸಿತ್ತು. ಆದರೆ ವೀರೇಂದ್ರ ಸೆಹ್ವಾಗ್ ಅವರು, ತಾವು ದೆಹಲಿಯಲ್ಲಿ ಬೆಳೆದವರು. ಹಾಗಾಗಿ ದೆಹಲಿ ತಂಡದಲ್ಲಿ ಆಡುತ್ತೇನೆ ಎಂದು ಹೇಳಿದರು. 2008ರಲ್ಲಿ ಹರಾಜು ಪ್ರಕ್ರಿಯೆ ಇಲ್ಲದ ಕಾರಣ ಸೆಹ್ವಾಗ್ ದೆಹಲಿ ತಂಡ ಸೇರಿಕೊಳ್ಳಲು ಸಿಎಸ್ಕೆ ಮ್ಯಾನೇಜ್ಮೆಂಟ್ ಒಪ್ಪಿಕೊಂಡಿತು. ನಂತರವಷ್ಟೇ ಧೋನಿಯನ್ನು ಆರಿಸಿದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೆಹಮಾನ್, ಕಮಲ್ ಹಾಸನ್ ಕಡೆಯಿಂದ ಸತತ ಆರು ಗಂಟೆ ಸಂಗೀತ ಸಂಜೆ ಕಾರ್ಯಕ್ರಮ
2008ರಲ್ಲಿ ಧೋನಿ ತುಂಬ ದುಬಾರಿ ಆಟಗಾರನಾಗಿದ್ದರು. ಆಗಲೇ 6 ಕೋಟಿ ರೂ.ಕೊಟ್ಟು ಕರೆತರಲಾಗಿತ್ತು. ಆದರೆ ಸಿಎಸ್ಕೆ ತಂಡದ ನಾಯಕನ ಸ್ಥಾನಕ್ಕೆ ಧೋನಿ ಮೊದಲ ಆಯ್ಕೆ ಆಗಿರಲಿಲ್ಲ ಎಂಬ ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲ ಎಂದು ಬದ್ರಿನಾಥ್ ತಿಳಿಸಿದ್ದಾರೆ.
ಹಾಗೇ, ಧೋನಿಯವರು ಜಗತ್ತಿನ ಅತ್ಯುತ್ತಮ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ ಎಂದೂ ಹೇಳಿದ್ದಾರೆ. (ಏಜೆನ್ಸೀಸ್)
VIDEO: 7 ತಿಂಗಳ ಬಳಿಕ ಪತ್ನಿ ಸಾನಿಯಾ ಮಿರ್ಜಾ ಭೇಟಿಯಾದ ಕ್ರಿಕೆಟಿಗ ಶೋಯಿಬ್ ಮಲಿಕ್