ಹೈದರಾಬಾದ್: ಹಾಡಹಗಲ್ಲೇ ಮನೆಗಳ್ಳತನ ಮಾಡಲು ಮುಂದಾಗಿದ್ದ ಇಬ್ಬರು ಶಸ್ತ್ರಸಜ್ಜಿತ ದರೋಡೆಕೋರರನ್ನು ಮಹಿಳೆಯರಿಬ್ಬರು ಹೊಡೆದು ಓಡಿಸಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದಿನ ರಸೂಲ್ಪುರ ಪೈಗಾ ಕಾಲೋನಿಯಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಬ್ಬರ ದೈರ್ಯಕ್ಕೆ ಮೆಟ್ಟಿಗರು ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳ್ಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಹಣಕ್ಕಾಗಿ ಮಗಳನ್ನು ಸೋನುಗೆ ದತ್ತು ಕೊಟ್ರಾ ಪೋಷಕರು?
ಈ ಕುರಿತು ಪ್ರತಿಕ್ರಿಯಿಸಿರುವ ಹೈದರಾಬಾದ್ ಉತ್ತರ ವಿಭಾಗದ ಡಿಸಿಪಿ, ಬಂಧಿತ ಆರೋಪಿಗಳನ್ನು ಸುಶೀಲ್ ಕುಮಾರ್ ಹಾಗೂ ಪ್ರೇಮಚಂದ್ರ ಎಂದು ಗುರುತಿಸಲಾಗಿದ್ದು, ಇಬ್ಬರು ಉತ್ತರಪ್ರದೇಶ ಮೂಲದವರು ಎಂದು ತಿಳಿದು ಬಂದಿದೆ. ಇಬ್ಬರೂ ಮನೆಯನ್ನು ದರೋಡೆ ಮಾಡಲು ಯೋಜಿಸಿದರು ಅದರಂತೆ ಮೊದಲಿಗೆ ಅಮಿತಾ ಮಹ್ನೋತ್ (ಮನೆಯ ಮಾಲೀಕರು) ಅವರನ್ನು ಕೊರಿಯರ್ ಬಂದಿರುವುದಾಗಿ ಹೇಳಿ ಕರೆದಿದ್ದಾರೆ. ಹೆಲ್ಮೆಟ್ ಧರಿಸಿದ್ದ ಇಬ್ಬರು ಆರೋಪಿಗಳು ಮನೆಯ ಮಾಲೀಕರು ಹೊರಬರುತ್ತಿದ್ದಂತೆ ಒಳ ನುಗ್ಗಿದ್ದಾರೆ.
ಆರೋಪಿಗಳ ಪೈಕಿ ಓರ್ವ ಮನೆಗೆಲಸದಾಕೆ ಕುತ್ತಿಗೆಗೆ ಚಾಕು ಇಟ್ಟು ಬೆಲೆಬಾಳುವ ವಸ್ತುಗಳನ್ನು ಕೊಡುವಂತೆ ಹೇಳಿದ್ದಾನೆ. ಇದಕ್ಕೆ ಒಪ್ಪದ ಮನೆ ಮಾಲಕಿ ಹಾಗೂ ಆಕೆಯ ಪುತ್ರಿ ಆರೋಪಿಗಳಿಬ್ಬರ ಮೇಲೆ ದಾಳಿ ಮಾಡಿದ್ದು, ಇಬ್ಬರನ್ನು ಹಿಡಿದಿದ್ದಾರೆ. ಈ ವೇಳೆ ಓರ್ವ ಆರೋಪಿ ತಪ್ಪಿಸಿಕೊಂಡಿದ್ದು, ಓರ್ವನನ್ನು ಸೆರೆ ಹಿಡಿಯಲಾಗಿದೆ. ಗಲಾಟೆ ಶಬ್ದ ಕೇಳಿ ಮಹಿಳೆಯರ ನೆರವಿಗೆ ಸ್ಥಳೀಯರು ಧಾವಿಸಿದ್ದು, ಕೂಡಲೇ ಪೊಲೀಸರಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇವರಿಬ್ಬರನ್ನು ಸೆರೆಹಿಡಿಯಲು ನಮಗೆ ಸಹಕರಿಸಿದ ವನಿತೆಯರಿಗೆ ಇಲಾಖೆ ವತಿಯಿಂದ ಸನ್ಮಾನಿಸಲಾಗುವುದು ಎಂದು ಹೈದರಾವಾದ್ ಉತ್ತರ ವಿಭಾಗದ ಡಿಸಿಪಿ ತಿಳಿಸಿದ್ದಾರೆ.