ತಿರುವನಂತಪ್ಪುರಂ: ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದ ಎರಡು ಆನೆಗಳು ಮೆರವಣಿಗೆಯ ಮಧ್ಯದಲ್ಲೇ ಕಾದಾಡಿರುವ ಘಟನೆ ಕೇರಳದ ಆರಟ್ಟುಪುಳ ದೇವಸ್ಥಾನದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಆರಟ್ಟುಪುಳ ದೇವಸ್ಥಾನದಲ್ಲಿ ಆರಾಟ್ ಆಚರಣೆಗಾಗಿ ಎರಡು ಆನೆಗಳನ್ನು ಅಲಂಕರಿಸಲಾಗಿದೆ. ಈ ವೇಳೆ ಆನೆಯೊಂದು ಇದ್ದಕ್ಕಿದ್ದಂತೆ ಗೀಳಿಡಲು ಶುರು ಮಾಡಿದ್ದು, ಏಕಾಏಕಿ ಮತ್ತೊಂದು ಆನೆಯ ಮೇಲೆ ದಾಳಿ ಮಾಡಿದೆ. ನೋಡ ನೋಡುತ್ತಿದ್ದಂತೆ ಎರಡು ಆನೆಗಳು ಕಾದಾಡಲು ಶುರು ಮಾಡುತ್ತವೆ. ಇದನ್ನು ನೋಡಿದ ಜನರು ದಿಕ್ಕಾಪಾಲಾಗಿ ಓಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಆರಟ್ಟುಪುಳ ದೇವಸ್ಥಾನದಲ್ಲಿ ಆರಾಟ್ ಆಚರಣೆಯಲ್ಲಿ ಪಾಲ್ಗೊಂಡಿದ್ದ ಆನೆಗಳನ್ನು ರವಿಕೃಷ್ಣನ್ ಹಾಗೂ ಶ್ರೀಕೃಷ್ಣನ್ ಎಂದು ಗುರುತಿಸಲಾಗಿದ್ದು, ಎರಡು ಆನೆಗಳನ್ನು ಸೆರೆಹಿಡಿಯಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಈ ಎರಡು ಆನೆಗಳನ್ನು ಗುರುವಾಯೂರಿನಿಧಂ ಕರೆತರಲಾಗಿತ್ತು ಎಂದು ತಿಳಿದು ಬಂದಿದೆ.
ಈ ವೇಳೆ ಇದನ್ನು ಗಮನಿಸಿದ ಆನೆ ದಳದ ಸದಸ್ಯರ ತಂಡವು ಕೂಡಲೇ ಕಾದಾಡುತ್ತಿರುವ ಎರಡು ಆನೆಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಾರೆ. ಆದರೆ, ಇದಕ್ಕೂ ಬಗ್ಗದ ಆನೆಗಳು ದೇವಾಲಯದ ಆವರಣದಿಂದ ಓಡಿ ಹೋಗುತ್ತವೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.