ಮೋರಟಗಿ: ಸಂಸ್ಥೆ ಅಭಿವೃದ್ಧಿಗಾಗಿ 5ಲಕ್ಷ ರೂ.ಅನುದಾನ ನೀಡುವುದಾಗಿ ಪದವೀಧರ ಮತಕ್ಷೇತ್ರದ ಎಂಎಲ್ಸಿ ಹಣಮಂತ ನಿರಾಣಿ ಹೇಳಿದರು. ಗ್ರಾಮದ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಕೈಗಾರಿಕೆ ತರಬೇತಿ ಕೇಂದ್ರಕ್ಕೆ ಇತ್ತೀಚೆಗೆ ಭೇಟಿ ನೀಡಿ ಕಟ್ಟಡ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲೂ ಇಂಥ ಸುಸಜ್ಜಿತ ಕಾಲೇಜ್, ಸುಂದರ ಮೈದಾನ ಕಂಡು ಸಂತಸವಾಗಿದೆ. ಈ ಸಂಸ್ಥೆಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಗುಡಿ ಕೈಗಾರಿಕೆಗಳಂಥ ಉದ್ಯೋಗ ಕೈಗೊಳ್ಳಬೇಕು. ಅಲ್ಲದೆ, ಇಲ್ಲಿ ತರಬೇತಿ ಪಡೆದ ಮಕ್ಕಳಿಗೆ ಇಲ್ಲೇ ಉದ್ಯೋಗ ನೀಡುವ ನಿಟ್ಟಿನಲ್ಲಿ ರೂಪುರೇಷ ಹಾಕಿಕೊಳ್ಳಬೇಕು ಎಂದರು.
ಎಂಎಲ್ಸಿ ಹಣಮಂತ ನಿರಾಣಿ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಖುಬಾ, ಪ್ರಾಚಾರ್ಯ ಎಂ.ಸಿ.ಸಿಂದಗಿ, ಕಾರ್ಯದರ್ಶಿ ಎನ್.ಎನ್.ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಟಿ.ಬೋನಾಳ, ಆರ್.ಕೆ.ಪತ್ತಾರ, ಅನೀಲ ಪಡಗಾನೂರ, ಪ್ರಸನ್ನ ಕೋರಿ, ಐ.ಎಂ.ಗಣಚಾರಿ, ಆರ್.ಸಿ.ಉಕ್ಕುಂಡಿ, ಎಸ್.ಜಿ.ಚೌದರಿ ಹಾಗೂ ವಿದ್ಯಾರ್ಥಿಗಳು ಇದ್ದರು.