ಮಳಕಾಲ್ಮೂರು: ಫೆ.21ರಂದು ಪಟ್ಟಣದ ಕೋಟೆ ಬಡಾವಣೆಯಲ್ಲಿನ ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾ ವೃಂದಾವನ ಪ್ರತಿಷ್ಠಾಪನೆ ಹಾಗೂ ಶ್ರೀ ಮಠದ ದಶಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ನೇತೃತ್ವ ವಹಿಸಿರುವ ಮಂತ್ರಾಲಯದ ಶ್ರೀ ಸುಬುದೇಂದ್ರತೀರ್ಥರು, ಫೆ.20ರ ಸಂಜೆ 5ಕ್ಕೆ ಪಟ್ಟಣಕ್ಕೆ ಆಗಮಿಸಲಿದ್ದು, ಭಕ್ತ ಮಂಡಳಿಯವರು ಮಂಗಳವಾದ್ಯ, ಪೂರ್ಣಕುಂಭ ಮೇಳದೊಂದಿಗೆ ಮಠಕ್ಕೆ ಬರಮಾಡಿಕೊಳ್ಳುವರು.
ಬಳಿಕ ಮಠದಲ್ಲಿ ಪಂಡಿತರಿಂದ ವೇಧಘೋಷ, ರಾಯರ ಆರಾಧನೆ, ಶ್ರೀಗಳಿಂದ ದಶಮಾನೋತ್ಸವ ಸ್ಮರಣ ಸಂಚಿಕೆ ಅನಾವರಣ, ಅನುಗ್ರಹ ಸಂದೇಶ ಮತ್ತು ಭಕ್ತರಿಗೆ ಮಂತ್ರಾಕ್ಷತೆ ಪ್ರಸಾದ ಕಾರ್ಯ ನೆರವೇರಲಿದೆ.
21ರ ಬೆಳಗ್ಗೆ 5.30ಕ್ಕೆ ನಿರ್ಮಾಲ್ಯ ವಿಸರ್ಜನೆ, 7.30ಕ್ಕೆ ಅಷ್ಟೋತ್ತರ ಪಾರಾಯಣ, 8ರಿಂದ 9ರ ವರೆಗೆ ಶ್ರೀನಿವಾಸ ದೇವರಿಗೆ ಮತ್ತು ಗುರುರಾಯರ ಬೃಂದಾವನಕ್ಕೆ ಶ್ರೀಗಳ ಅಮೃತ ಹಸ್ತದಿಂದ ಫಲ ಪಂಚಾಮೃತ ಅಭಿಷೇಕ, ಪಾದಪೂಜೆ, ಮುದ್ರಾ ಧಾರಣೆ ಸೇವೆ ನಡೆಯಲಿದೆ. 11 ಗಂಟೆಗೆ ಮೂಲ ರಾಮದೇವರ ಸಂಸ್ಥಾನ ಪೂಜೆ ಮತ್ತು ಹಸ್ತೋದಕ ಬ್ರಾಹ್ಮಣ ಸುವಾಸಿನಿಯರಿಂದ ತೀರ್ಥ ಪ್ರಸಾದ, ಸಂಜೆ 6ಕ್ಕೆ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.
2010ರಲ್ಲಿ ವೃಂದಾವನದ ಪ್ರತಿಷ್ಠಾಪನೆ: 2010ರ ಫೆಬ್ರವರಿಯಲ್ಲಿ ಅಂದಿನ ಗುರುಗಳಾದ ಶ್ರೀ ಸುಯತೀಂದ್ರ ತೀರ್ಥರು, ರಾಯರ ವೃಂದಾವನವದ ಪ್ರತಿಷ್ಠಾಪನೆ ನೆರವೇರಿಸಿದ್ದರು. ಅಂದಿನಿಂದ ವರ್ಷವೂ ಮಠದಲ್ಲಿ ಪ್ರವಚನ, ಆರಾಧನೆ, ಕಲ್ಯಾಣೋತ್ಸವ, ದಾತ್ರಿಹವನ, ಮಧ್ವನವಮಿ ಮತ್ತು ರಾಯರ ಮಠದ ಯತಿಗಳ ಆರಾಧನಾ ಮಹೋತ್ಸವ, ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಯರ ಆಶೀರ್ವಾದ ಮತ್ತು ಶ್ರೀ ಸುಬುದೇಂದ್ರತೀರ್ಥರ ಆಶೀರ್ವಚನ ಪಡೆಯಬೇಕೆಂದು ಮಠದ ಅಧ್ಯಕ್ಷ ಎಂ.ಎಸ್.ರಾಘವೇಂದ್ರ ಕೋರಿದ್ದಾರೆ.