ಮೊಳಕಾಲ್ಮೂರು: ಆರೋಗ್ಯ ಸುರಕ್ಷತೆಗೆ ಮನೆಗೊಂದು ಬಚ್ಚಲು ಇಂಗು ಗುಂಡಿ ನಿರ್ಮಾಣಕ್ಕೆ ಗ್ರಾಪಂ ಆಡಳಿತ ಜನರ ಮನವರಿಕೆ ಮಾಡಿಕೊಡುವಂತೆ ತಹಸೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಜಿಲ್ಲಾಧಿಕಾರಿ ಕವಿತಾ ಮನ್ನೀಕೇರಿ ಸೂಚಿಸಿದರು.
ತಾಲೂಕಿನ ಸೂಲೇಹಳ್ಳಿಯಲ್ಲಿ ಆರೋಗ್ಯ ಸಮಸ್ಯೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಭೇಟಿ ನೀಡಿ ಗ್ರಾಮದ ವಿವಿಧೆಡೆ ಸಂಚರಿಸಿ ಪರಿಶೀಲನೆ ನಡೆಸಿ ಮಾತನಾಡಿದರು.
ರಸ್ತೆ ಮೇಲೆ ಮನೆಗಳ ತ್ಯಾಜ್ಯದ ನೀರು ಹರಿಯುತ್ತಿದೆ. ಇದರಿಂದ ಪರಿಸರ ಹದಗೆಡಲಿದ್ದು, ಕೂಡಲೇ ನೈರ್ಮಲ್ಯ ಕಾಪಾಡುವಂತೆ ಮಾಡಬೇಕು. ತಕ್ಷಣ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು ಎಂದರು.
ಪ್ರತಿ ಮನೆಗೊಂದು ಬಚ್ಚಲು ನೀರಿನ ಇಂಗು ಗುಂಡಿ ಮತ್ತು ಕಾಲನಿಗಳಲ್ಲಿ ಚರಂಡಿ ನಿರ್ಮಿಸಬೇಕು. ಗ್ರಾಮಸ್ಥರ ಆರೋಗ್ಯ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಟಿಎಚ್ಒ ಡಾ.ಸುಧಾ ಮಾತನಾಡಿ, ಗ್ರಾಮದಲ್ಲಿ ಮೂರು ಜನಕ್ಕೆ ಜ್ವರ ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಜನರ ಸುರಕ್ಷತೆಗಾಗಿ ಮಂಗಳವಾರ ಆರೋಗ್ಯ ಶಿಬಿರ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.
ತಾಪಂ ಇಒ ಪ್ರಕಾಶ್, ಪಿಡಿಒ ಮಾರಪ್ಪ, ಕಂದಾಯ ಅಧಿಕಾರಿ ಪ್ರಾಣೇಶ್, ಆರೋಗ್ಯ ಸಿಬ್ಬಂದಿ ಇತರರಿದ್ದರು.