ಮೊಳಕಾಲ್ಮೂರು: ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಸಿದ್ದರೂ ಮೊಳಕಾಲ್ಮೂರಿನಲ್ಲಿ ಮಧ್ಯಾಹ್ನ 2 ಗಂಟೆ ನಂತರ ವ್ಯಾಪಾರ, ವಹಿವಾಟಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದೆರಡು ತಿಂಗಳಿಂದ ಎಲ್ಲ ರೀತಿ ಚಟುವಟಿಕೆ ಸ್ಥಗಿತವಾಗಿವೆ. ಕೆಲ ನಿಬಂಧನೆಯಡಿ ಈಗ ಅವಕಾಶ ನೀಡಲಾಗಿದ್ದರೂ ಮೊಳಕಾಲ್ಮೂರಲ್ಲಿ ಮಧ್ಯಾಹ್ನ 2ರೊಳಗೆ ಅಂಗಡಿಮುಂಗಟ್ಟುಗಳ ಬಾಗಿಲು ಹಾಕಬೇಕಿದೆ.
ಹಳ್ಳಿಗಳಲ್ಲಿ ಮನೆ, ಜಮೀನು, ದನ-ಕರುಗಳ ಕೆಲಸ ಮಾಡುವ ಹೊತ್ತಿಗೆ ಗಂಟೆ 10 ಆಗಿರುತ್ತದೆ. ಗಡಿಬಿಡಿಯಲ್ಲಿ ದಿನಬಳಕೆ ವಸ್ತುಗಳ ಖರೀದಿ, ಬ್ಯಾಂಕ್ ಇತರೆ ಕೆಲಸ ಮಾಡಿಕೊಳ್ಳಬೇಕಿದೆ. ಸಂಜೆ ವರೆಗೆ ಅವಕಾಶ ನೀಡಿದರೆ ಅನುಕೂಲ ಎಂದು ಜನರು ತಿಳಿಸಿದ್ದಾರೆ.
ಆಂಧ್ರದಿಂದ ವಲಸಿಗರ ತಡೆಗೆ ಕ್ರಮ: ಆಂಧ್ರದಿಂದ ಜನರನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಚೆಕ್ಪೋಸ್ಟ್ಗಳಲ್ಲಿ ಭದ್ರತೆ ಕೈಗೊಂಡಿದ್ದರೂ ಕಾಡುಮೇಡುಗಳ ಮೂಲಕ ಪಟ್ಟಣಕ್ಕೆ ಬರುತ್ತಿದ್ದಾರೆ. ಸೋಂಕು ಹರಡದಂತೆ ತಡೆಯಲು ಔಷಧ ಅಂಗಡಿ ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಈ ನಿರ್ಧಾರಕ್ಕೆ ಅನೇಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ತಹಸೀಲ್ದಾರ್ ಎಂ. ಬಸವರಾಜ್ ತಿಳಿಸಿದ್ದಾರೆ.