ಮೊಳಕಾಲ್ಮೂರು: ಕರೊನಾ ಭೀತಿಯಿಂದ ತವರೂರು ಸೇರಿರುವ 600 ಕೂಲಿ ಕಾರ್ಮಿಕರು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಗುರುವಾರ ಕೆಲಸ ಮಾಡಿದರು.
ಕ್ರಿಯಾ ಯೋಜನೆ ಪಟ್ಟಿಯಂತೆ ನಾಗಸಮುದ್ರ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಕೂಲಿಕಾರರಿಂದ ಅಭಿವೃದ್ಧಿ ಕೆಲಸ ಮಾಡಿಸಲಾಗುತ್ತಿದೆ.
ಪರಸ್ಪರ ಅಂತರ ಕಾಯ್ದುಕೊಂಡು ಅಳತೆ ಲೆಕ್ಕದಲ್ಲಿ ಹಂಚಿಕೆ ಮಾಡಲಾಗಿದ್ದ ಕೆಲಸಕ್ಕೆ ಬೆಳಗ್ಗೆ 6ಕ್ಕೆ ಹಾಜರಿದ್ದ 600 ಕಾರ್ಮಿಕರು ಮಧ್ಯಾಹ್ನ 12ಕ್ಕೆ ಮನೆಗೆ ತೆರಳಿದರು ಎಂದು ತಾಪಂ ಇಒ ಪ್ರಕಾಶ್ ಮಾಹಿತಿ ನೀಡಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕೂಲಿಕಾರರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಖಾತ್ರಿ ಹಾಗೂ ಜಲಾಮೃತ ಯೋಜನೆ ಅನುಕೂಲವಾಗಿವೆ.
ತಾಲೂಕಿನಲ್ಲಿ 30429 ಜಾಬ್ಕಾಡ್ ಹೊಂದಿರುವ ಕೂಲಿ ಕಾರ್ಮಿಕರಿದ್ದಾರೆ. ವಲಸೆ ಹೋಗಿ ಬಂದ 536 ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳಲಾಗಿದೆ.
ಏಪ್ರಿಲ್ ಮೊದಲ ವಾರದಿಂದಲೂ ನಾಗಸಮುದ್ರ, ಅಶೋಕ ಸಿದ್ದಾಪುರ, ಅಮುಕುಂದಿ, ಸಂತೇಗುಡ್ಡ, ಕೋನಸಾಗರ, ರಾಯಾಪುರ, ತಮ್ಮೇನಹಳ್ಳಿ, ಜೆಬಿಹಳ್ಳಿ, ನೇರ್ಲಹಳ್ಳಿ ಸೇರಿ ವಿವಿಧೆಡೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಇಒ ಪ್ರಕಾಶ್ ಹೇಳಿಕೆ: ಗ್ರಾಪಂ ಮಟ್ಟದಲ್ಲಿ ಕೂಲಿಕಾರರ ಬೇಡಿಕೆ ಅನುಸಾರ 10 ಜನ ಕಾಯಕ ಮಿತ್ರರನ್ನು ನೇಮಕ ಮಾಡಲಾಗಿದೆ. ಕೂಲಿಕಾರರ ಹಾಜರಾತಿ ಸಂಗ್ರಹ, ಕೆಲಸ ಹಂಚಿಕೆ, ನಿರ್ವಹಣೆ, ಕುಡಿಯುವ ನೀರು ಸೇರಿ ಅಗತ್ಯ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ.