ಬೆಂಗಳೂರು: ಕ್ಷೇತ್ರದ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಟ್ಟುಕೊಂಡಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಪರವಾಗಿ ಸಂಸದ ಪಿ.ಸಿ. ಮೋಹನ್ ಶನಿವಾರ ಭರ್ಜರಿ ಪ್ರಚಾರ ನಡೆಸಿದರು.
ಗಾಂಧಿನಗರ ಕ್ಷೇತ್ರ ವ್ಯಾಪ್ತಿಯ ಓಕಳಿಪುರ ವಾರ್ಡ್ನ ನ್ಯೂ ಕಾಳಪ್ಪ ಬ್ಲಾಕ್ನಲ್ಲಿ ಸ್ಥಳೀಯ ಮುಖಂಡರಾದ ಶಿವಪ್ರಕಾಶ್ ಸೇರಿ ಪಕ್ಷದ ನೂರಾರು ಕಾರ್ಯಕರ್ತರ ಜತೆಗೂಡಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು. ವಿಶೇಷವಾಗಿ ಯುವ ಮತದಾರರು ಸಪ್ತಗಿರಿಗೌಡರಿಗೆ ಸ್ವಯಂಪ್ರೇರಿತ ಬೆಂಬಲ ಸೂಚಿಸುತ್ತಿದ್ದಾರೆ.
ಕೇಂದ್ರ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದರೆ ಕ್ಷೇತ್ರಕ್ಕೂ ಹೆಚ್ಚಿನ ಅನುಕೂಲವಾಗಲಿದೆ ಎಂಬ ಆಶಯದೊಂದಿಗೆ ಸಾರ್ವಜನಿಕರು ಸಪ್ತಗಿರಿ ಗೌಡರಿಗೆ ಪಕ್ಷಾತೀತವಾಗಿ ಬೆಂಬಲ ಸೂಚಿಸಿದ ದೃಶ್ಯ ಕಂಡುಬಂತು. ಬೆಳಗ್ಗೆ ಕ್ಷೇತ್ರದ ಮಾಗಡಿ ರಸ್ತೆ, ಬಿನ್ನಿಪೇಟೆ, ವಾಟರ್ ಟ್ಯಾಂಕ್ 8ನೇ ಅಡ್ಡರಸ್ತೆ ಮುಂತಾದೆಡೆ ಮುಖಂಡರಾದ ಬಿ.ಟಿ.ಎಸ್. ನಾಗರಾಜ್, ಅಭಿನಾಗ್ ಸೇರಿ ನೂರಾರು ಯುವ ಕಾರ್ಯಕರ್ತರು ಮತಯಾಚನೆ ಮಾಡಿದರು.
ಗಾಂಧಿನಗರದಿಂದ ಈ ಬಾರಿ ಆಯ್ಕೆಯಾದರೆ ಮಾದರಿ ಕ್ಷೇತ್ರ ಮಾಡಲು ಹೆಗ್ಗುರಿ ಹಾಕಿಕೊಂಡಿರುವ ಕ್ಷೇತ್ರದ ಜನರಿಗೆ ಸಪ್ತ ಭರವಸೆಗಳನ್ನು ನೀಡಿರುವುದು ಮತದಾರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು, ಶಾಲೆಗಳ ಆಧುನೀಕರಣ, ಪ್ರತಿ ವಾರ್ಡ್ನಲ್ಲೂ ಪಾರ್ಕ್ಗಳ ನಿರ್ವಣ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಸೇರಿ ಹಲವಾರು ಭರವಸೆಗಳನ್ನು ಸಪ್ತಗಿರಿ ಗೌಡ ನೀಡಿರುವುದು ಸಕಾರಾತ್ಮಕ ಅಭಿಪ್ರಾಯ ಮೂಡಿಸುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿರುವ ಸಪ್ತಗಿರಿ ಗೌಡ ಮಾತನಾಡಿ, ತಮ್ಮನ್ನು ಆಯ್ಕೆ ಮಾಡಿದರೆ ಕಾಲಮಿತಿಯೊಳಗೆ ಭರವಸೆಗಳನ್ನು ಅನುಷ್ಠಾನ ಮಾಡುವುದಾಗಿ ವಾಗ್ದಾನ ಮಾಡಿದರು. ದೇಶ ಮತ್ತು ರಾಜ್ಯದ ಭದ್ರ ಬುನಾದಿಗೆ ಬಿಜೆಪಿ ಬೆಂಬಲಿಸಬೇಕು. ‘ಬದಲಾವಣೆ ನಮ್ಮಿಂದ ಮಾತ್ರ ಸಾಧ್ಯ’ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಸಿದರು.