ನವದೆಹಲಿ: ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು 2002ರ ಗುಜರಾತ್ ಗುಲಭೆಗೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್ಐಟಿ)ಯಿಂದ ಸತತ 9 ಗಂಟೆಗೆ ವಿಚಾರಣೆ ಎದುರಿಸಿದ್ದರು. ನೂರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಭಯಾನಕ ತಾಳ್ಮೆಯಿಂದ ಉತ್ತರ ಕೊಟ್ಟಿದ್ರು. ಆದ್ರೆ ಒಂದೇ ಒಂದು ಕಪ್ ಟೀ ಕೂಡ ಕುಡಿದಿರಲಿಲ್ಲ. ಹೀಗೆಂದು ಎಸ್ಐಟಿ ಮುಖ್ಯಸ್ಥರಾಗಿದ್ದ ಆರ್.ಕೆ.ರಾಘವನ್ ತಮ್ಮ ಆತ್ಮಕಥನ ಎ ರೋಡ್ ವೆಲ್ ಟ್ರಾವೆಲ್ಡ್ ನಲ್ಲಿ ಬರೆದುಕೊಂಡಿದ್ದಾರೆ.
ರಾಘವನ್ ಕೃತಿಗೇಕಿಷ್ಟು ಪ್ರಾಮುಖ್ಯತೆ?
ಸುಪ್ರೀಂಕೋರ್ಟ್ ರಚಿಸಿದ ಎಸ್ಐಟಿ ನೇತೃತ್ವ ವಹಿಸುವ ಮೊದಲು ರಾಘವನ್ ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಅನೇಕ ಪ್ರಮುಖ ಪ್ರಕರಣಗಳ ತನಿಖೆಯಲ್ಲೂ ಅವರು ಭಾಗವಹಿಸಿದ್ದರು. ಬೊಫೋರ್ಸ್ ಹಗರಣ, 2000ನೇ ಇಸವಿಯ ದಕ್ಷಿಣ ಆಫ್ರಿಕಾ ಮ್ಯಾಚ್ ಫಿಕ್ಸಿಂಗ್ ಹಗರಣ ಮತ್ತು ಬಿಹಾರದ ಮೇವು ಹಗರಣ ಅವುಗಳಲ್ಲಿ ಸೇರಿವೆ.
ಮೋದಿಯವರು ಖುದ್ದಾಗಿ ಎಸ್ಐಟಿ ಕಚೇರಿಗೆ ಬಂದು ವಿಚಾರಣೆ ಎದುರಿಸಬೇಕು. ಬೇರೆ ಸ್ಥಳದಲ್ಲಿ ವಿಚಾರಣೆ ನಡೆಸಿದರೆ ಅದನ್ನು ತಪ್ಪಾಗಿ ಅರ್ಥೈಸಲಾಗುತ್ತದೆ ಎಂಬುದನ್ನು ಮೋದಿ ಅವರ ಸಿಬ್ಬಂದಿಗೆ ನಾವು ಮನವರಿಕೆ ಮಾಡಿಕೊಟ್ಟಿದ್ದೆವು. ಇದನ್ನು ಮೋದಿಯವರೂ ಅರ್ಥಮಾಡಿಕೊಂಡು ಖುದ್ದು ಎಸ್ಐಟಿ ಕಚೇರಿಗೆ ಬರಲು ಒಪ್ಪಿದರು. ವಿಚಾರಣೆಗೆ ನೋಟಿಸ್ ಕಳುಹಿಸಿದ್ದನ್ನು ಸ್ವೀಕರಿಸಿ ಗಾಂಧಿನಗರದಲ್ಲಿರುವ ಎಸ್ಐಟಿ ಕಚೇರಿಗೆ ಮೋದಿ ಆಗಮಿಸಿದ್ದರು. ಬರುವಾಗ ಒಂದು ಬಾಟಲಿ ನೀರನ್ನು ತಾವೇ ತಂದಿದ್ದರು. ಚಹಾ ನೀಡಿದ್ದರೂ ಅದನ್ನು ನಯವಾಗಿ ತಿರಸ್ಕರಿಸಿದ್ದರು.
ಇದನ್ನೂ ಓದಿ: ಪಬ್ಜಿಗೆ ಪರ್ಯಾಯವಾಗಿ ಬರಲಿದೆ ಫೌಜಿ; ಟೀಸರ್ 5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ
ಎಸ್ಐಟಿ ಕಚೇರಿಯ ತಮ್ಮ ಕೊಠಡಿಯಲ್ಲೇ ಮೋದಿಯವರನ್ನು ಸುಮಾರು 9 ತಾಸುಗಳ ಕಾಲ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ತಡರಾತ್ರಿವರೆಗೆ ಮುಂದುವರಿದರೂ ಮೋದಿ ತಾಳ್ಮೆ ಕಳೆದುಕೊಂಡಿರಲಿಲ್ಲ. ತನಿಖಾ ತಂಡ ಕೇಳಿದ ಯಾವೊಂದು ಪ್ರಶ್ನೆಯಿಂದಲೂ ಅವರು ಉತ್ತರ ನೀಡದೆ ತಪ್ಪಿಸಿಕೊಳ್ಳಲಿಲ್ಲ. ಊಟದ ವಿರಾಮ ತೆಗೆದುಕೊಳ್ಳುತ್ತೀರಾ ಎಂದು ಕೇಳಲಾಗಿತ್ತು. ಅದನ್ನೂ ನಿರಾಕರಿಸಿದರು ಅವರು ಎಂದು ರಾಘವನ್ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. (ಏಜೆನ್ಸೀಸ್)