ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೂರು ಮೊಬೈಲ್ ಗಳು ಪತ್ತೆ ಯಾಗಿದ್ದು, ಅದರ ವಾರಸುದಾರರು ಯಾರೆಂಬುದು ನಿಗೂಢವಾಗಿದೆ. ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಮಲ್ಲಿಕಾರ್ಜುನ, ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ದಾರೆ.
2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿ ಟಿ. ನಾಸೀರ್, ಜೈಲಿನಲ್ಲಿ ಇದ್ದುಕೊಂಡೇ ಉಗ್ರ ಚಟುವಟಿಕೆಗೆ ಪ್ರಚೋದನೆ ಕೊಡುತ್ತಿದ್ದ. ಈತನಿಂದ ಪ್ರೇರಣೆಗೆ ಒಳಗಾದ ಐವರು ಶಂಕಿತರನ್ನು ಸಿಸಿಬಿ ಪೊಲೀಸರು ಜು. 18ರಂದು ಬಂಧಿಸಿದ್ದರು. 19ಕ್ಕೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸುದ್ದಿಗೋಷ್ಠಿ ನಡೆಸಿ, ಜೈಲಿನಲ್ಲಿ ಇರುವ ಟಿ. ನಾಸೀರ್ ಮತ್ತು ಶಂಕಿತರು ಸಂಪರ್ಕದಲ್ಲಿ ಇರುವುದನ್ನು ಬಹಿರಂಗಪಡಿಸಿದ್ದರು.
ಎಚ್ಚೆತ್ತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಉಪ ಮಹಾನಿರೀಕ್ಷಕ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜೈಲಿನ ವಿವಿಧೆಡೆ ಕೈದಿಗಳ ಬ್ಯಾರಕ್ಗಳನ್ನು ಜಾಲಾಡಿದಾಗ ಶೌಚಗೃಹ ಹಿಂಭಾಗದಲ್ಲಿ 1 ಸ್ಯಾಮ್ಸಾಂಗ್ ಮೊಬೈಲ್ ಪತ್ತೆಯಾಗಿದೆ. ಇದಾದ ಮೇಲೆ ಭದ್ರತಾ ವಿಭಾಗ-2ರಲ್ಲಿ ನೋಕಿಯಾ ಮೊಬೈಲ್, ಒನಿಡಾ ಪತ್ತೆಯಾಗಿದೆ. ಇದರ ವಾರಸುದಾರರು ಯಾರೆಂಬುದು ಗೊತ್ತಾಗಿಲ್ಲ.
ಜೈಲಿನ ಒಳಗೆ ಮೊಬೈಲ್ಗಳು ಪತ್ತೆಯಾಗಿದ್ದು, ಬಳಕೆದಾರರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಜೈಲು ಅಧಿಕಾರಿಗಳು ಮನವಿ ಮಾಡಿದ್ದಾರೆ. ಜೈಲಿನ ಗೇಟ್ನಲ್ಲಿ ಮೆಟಲ್ ಡಿಟೆಕ್ಟರ್ ಮತ್ತು ವಿವಿಧ ಹಂತದಲ್ಲಿ ಒಳ ಪ್ರವೇಶ ಮಾಡುವರ ತಪಾಸಣೆ ನಡೆಯುತ್ತದೆ. ಇಷ್ಟೆಲ್ಲ ಇದ್ದರೂ ಮೊಬೈಲ್ಗಳು ಜೈಲಿನಲ್ಲಿ ಪತ್ತೆಯಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.