ನವದೆಹಲಿ: ಮಳೆಯಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ತೊರೆಯನ್ನು ದಾಟಿ ಮರಳುತ್ತಿದ್ದ ಶಾಸಕರೊಬ್ಬರು ಆಯತಪ್ಪಿ ತೊರೆಯೊಳಗೆ ಬಿದ್ದು ಸ್ವಲ್ಪ ದೂರ ನೀರಿನಲ್ಲಿ ಎಳೆದುಕೊಂಡು ಹೋಗಲ್ಪಟ್ಟಿದ್ದರು. ಅವರ ಜತೆಗಿದ್ದವರು ತಕ್ಷಣವೇ ಶಾಸಕರನ್ನು ರಕ್ಷಿಸಲು ಮುಂದಾಗಿದ್ದರಿಂದ ಅದೃಷ್ಟವಶಾತ್ ಬದುಕುಳಿದರು.
ಉತ್ತರಾಖಂಡದ ಕಾಂಗ್ರೆಸ್ ಶಾಸಕ ಹರೀಶ್ ಧಾಮಿ ಆಕಸ್ಮಿಕವಾಗಿ ತೊರೆಗೆ ಬಿದ್ದು ಬದುಕುಳಿದವರು. ನೇಪಾಳ ಗಡಿ ಸಮೀಪದ ಪಿತ್ತೋರ್ಗಢದ ಧಾರ್ಚುಲಾ ಪ್ರದೇಶ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಭಾರಿ ಹಾನಿಗೀಡಾಗಿತ್ತು. ಇದನ್ನು ಪರಿಶೀಲಿಸಲು ಶಾಸಕ ಹರೀಶ್ ಧಾಮಿ ತೊರೆಯನ್ನು ದಾಟಿಕೊಂಡು ಹೋಗಿದ್ದರು.
ಇದನ್ನೂ ಓದಿ: ಆ 38 ವರ್ಷಗಳು… ಒಮ್ಮೆ ಶಿಕ್ಷೆ… 2 ಬಾರಿ ಖುಲಾಸೆ… 6 ಸಿಜೆಐಗಳು…
ಆದರೆ, ಅವರು ಪರಿಶೀಲನೆ ಮುಗಿಸಿ ಮರಳುವ ವೇಳೆಗೆ ತೊರೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಜತೆಗೆ ಕೆಸರು ತುಂಬಿಕೊಂಡಿತ್ತು. ಆದ್ದರಿಂದ, ಶಾಸಕರು ತುಂಬಾ ಎಚ್ಚರಿಕೆಯಿಂದ ತೊರೆ ದಾಟಲು ಮುಂದಾಗಿದ್ದರು. ಆದರೆ ದೇಹದ ಭಾರದಿಂದಾಗಿ ಆಯ ತಪ್ಪಿದ ಅವರು ಹಠಾತ್ತನೆ ತೊರೆಯೊಳಗೆ ಬಿದ್ದರು.
ತಕ್ಷಣವೇ ಅವರ ಜತೆಗಿದ್ದ ಜನರು ಶಾಸಕರ ನೆರವಿಗೆ ಮುಂದಾಗಿದ್ದರು. ಆದರೆ, ನೀರಿನ ರಭಸ ಹೆಚ್ಚಾಗಿದ್ದರಿಂದ ಶಾಸಕರು ನೀರಿನಲ್ಲಿ ಕೊಚ್ಚಿ ಹೋಗಲಾರಂಭಿಸಿದ್ದರು. ಆದರೆ, ಜತೆಯಲ್ಲಿದ್ದ ನಾಲ್ಕೈದು ಜನರು ಶಾಸಕರನ್ನು ಹಿಡಿದುಕೊಂಡಿದ್ದಲ್ಲದೆ, ಐದನೇ ವ್ಯಕ್ತಿ ಶಾಸಕರ ಎಡಭಾಗಕ್ಕೆ ಹೋಗಿ ಅವರನ್ನು ಹಿಡಿದು ಮೇಲೆತ್ತಿ ಬಂಡೆ ಮೇಲೆ ನಿಲ್ಲಿಸುವಲ್ಲಿ ಯಶಸ್ವಿಯಾದರು.
#WATCH Uttarakhand: Congress MLA Harish Dhami had a narrow escape after he slipped while crossing a flooded rivulet in Dharchula area of Pithoragarh. He was rescued by party workers & supporters accompanying him. (30.07.2020) pic.twitter.com/9pZDHSd30T
— ANI (@ANI) July 31, 2020
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರು, ನೀರು ತುಂಬಾ ಕೆಸರಿನಿಂದ ಕೂಡಿತ್ತು. ಅಲ್ಲದೆ, ಹರಿಯುವ ಅವಶೇಷಗಳು ಕೂಡ ಹೆಚ್ಚಾಗಿದ್ದವು. ನಾನು ಆಯತಪ್ಪಿ ನೀರಿನೊಳಗೆ ಬಿದ್ದೆ. ನಿಲ್ಲಲು ಪ್ರಯತ್ನಿಸುವಾಗ ನೀರಿನ ರಭಸಕ್ಕೆ ಸ್ವಲ್ಪ ದೂರ ಕೊಚ್ಚಿಕೊಂಡು ಹೋದೆ. ಆದರೆ, ನನ್ನ ಜತೆಯಲ್ಲಿದ್ದವರು ನನ್ನನ್ನು ರಕ್ಷಿಸಿದರು. ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದೆ ಎಂದು ಹೇಳಿದ್ದಾರೆ.
5 ವರ್ಷದೊಳಗಿನ ಮಕ್ಕಳಲ್ಲಿ ಅತಿಹೆಚ್ಚು ಕರೊನಾ ವೈರಾಣು; ಸೂಪರ್ಸ್ಪ್ರೆಡರ್ಗಳಾಗುತ್ತಾರಾ ಈ ಮಕ್ಕಳು?