ಮಂಡ್ಯ: ಬೆಂಗಳೂರಿನಲ್ಲಿ ಪೊಲೀಸರು ನನ್ನನ್ನು ಬಂಧಿಸಿದ್ದಾರೆಂಬುದು ಸಂಪೂರ್ಣ ಸುಳ್ಳು. ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿದ್ದೆ ಎಂದು ಶಾಸಕ ರವಿಕುಮಾರ್ ಗಣಿಗ ಸ್ಪಷ್ಟಪಡಿಸಿದ್ದಾರೆ.
2013ರಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಇಹಲೋಕ ತ್ಯಜಿಸಿದ ಸಂದರ್ಭದಲ್ಲಿ ಅವರ ದರ್ಶನ ಪಡೆಯಲು ನಾನು ಬಿಜಿಎಸ್ ಆಸ್ಪತ್ರೆಗೆ ತೆರಳಿದ್ದೆ. ಆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಬಂದಿದ್ದರು. ಅಂತೆಯೇ ಅಲ್ಲಿಗೆ ನೈಸ್ ಸಂಸ್ಥೆಯ ಅಶೋಕ್ ಖೇಣಿ ಕೂಡ ಆಗಮಿಸಿದ್ದರು. ಈ ವೇಳೆ ದೇವೇಗೌಡರನ್ನು ಅಶೋಕ್ ಖೇಣಿ ನಿಂದಿಸಿದ್ದಾರೆಂದು ಕೆಲವರು ಪ್ರಶ್ನೆ ಮಾಡಿದಾಗ ಘರ್ಷಣೆ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಅಶೋಕ್ ಖೇಣಿ ಅವರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ನನ್ನನ್ನು ಸೇರಿದಂತೆ ಎಚ್.ಡಿ.ದೇವೇಗೌಡ, ಅರುಣ್ಗೌಡ, ಕೆಪಿಎಸ್ಸಿ ಮಾಜಿ ಅಧ್ಯಕ್ಷ ಎಚ್.ಎನ್.ಕೃಷ್ಣ, ಪತ್ರಕರ್ತ ವೆಂಕಟೇಶ್, ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಮೇಲೆ ದೂರು ನೀಡಿದ್ದರು ಎಂದು ವಿವರಿಸಿದ್ದಾರೆ.
ನಾನು ಶಾಸಕನಾದ ನಂತರ ಈ ಪ್ರಕರಣ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ಅದರ ವಿಚಾರವಾಗಿ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿದ್ದೆ. ಈ ಸಂದರ್ಭದಲ್ಲಿ ಬೆಂಗಳೂರು ಪೊಲೀಸರು ನನ್ನನ್ನು ಬಂಧಿಸಿದ್ದಾರೆಂದು ಮಾಹಿತಿ ಹರಿದಾಡಿದೆ. ಇದೊಂದು ಸಂಪೂರ್ಣ ಸುಳ್ಳು ಮಾಹಿತಿ, ನನ್ನ ಬಂಧನವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.