ಗಂಗಾವತಿ: ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ಜತೆಗೆ ಆಸ್ತಿಗಳ ಸೃಜನೆಯಾಗುತ್ತಿದ್ದು, ಗ್ರಾಮಾಭಿವೃದ್ಧಿಗೆ ಜನರ ಸಹಕಾರ ಮುಖ್ಯ ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು.
ತಾಲೂಕಿನ ವಡ್ಡರಹಟ್ಟಿಯ ಹೊಸ ಲೇಔಟ್ನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೊಸದಾಗಿ ನಿರ್ಮಿಸಿರುವ ಭಾರತ ನಿರ್ಮಾಣ ಸೇವಾ ಕೇಂದ್ರ (ಗ್ರಾಪಂ ಕಚೇರಿ)ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಪಂ ಸದಸ್ಯರು, ಗ್ರಾಮಸ್ಥರು ಒಗ್ಗಟ್ಟಾಗಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಬೇಕಿದ್ದು, ಜಿಲ್ಲೆಯಲ್ಲಿ ಅತಿ ದೊಡ್ಡದಾದ ವಡ್ಡರಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗುತ್ತಿವೆ. ಖಾತ್ರಿ ಯೋಜನೆ ಸಮರ್ಪಕ ಅನುಷ್ಟಾನಗೊಂಡರೆ ಮೂಲ ಸೌಕರ್ಯ ಪಡೆದುಕೊಳ್ಳಲು ಸಾಧ್ಯ ಎಂದರು.
ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, ಗ್ರಾಪಂ ವ್ಯಾಪ್ತಿಯ ಐದು ಪಿಯು, 2 ಪದವಿ ಕಾಲೇಜುಗಳಿದ್ದು, ಶೈಕ್ಷಣಿಕವಾಗಿ ಸದೃಢವಾಗಿದೆ. ಗ್ರಾಮಾಭಿವೃದ್ಧಿಯತ್ತ ಗಮನಹರಿಸಬೇಕಿದ್ದು, ಒತ್ತುವರಿಗೆ ಅವಕಾಶ ನೀಡದಂತೆ ಸಲಹೆ ನೀಡಿದರು.
ತಾಪಂ ಇಒ ಮಹಾಂತಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷೆ ಗಂಗಮಾಳಮ್ಮನಿಂಗಪ್ಪ, ಉಪಾಧ್ಯಕ್ಷೆ ಹುಲಿಗೆಮ್ಮ ರಮೇಶ ಕಾಳಿ, ಪಿಡಿಒ ಕಾಶಿನಾಥ ಹಂಚಿನಾಳ್,ಕಾಯದರ್ಶಿ ಈಶಪ್ಪ, ತಾಂತ್ರಿಕಸಂಯೋಜಕ ಬಸವರಾಜ ಜಟಗಿ, ಸಹಾಯಕ ಪ್ರವೀಣ ಗದಗ, ಮುಖಂಡರಾದ ಶಿವಪ್ಪ ಹತ್ತಿಮರದ, ಸಣ್ಣ ರಾಮಣ್ಣ ನಾಯಕ, ಗಡ್ಡಿ ಯಮನಪ್ಪ, ಟಿ.ದುರಗಪ್ಪ, ಗಡ್ಡಿ ನಾಗೇಶಪ್ಪ ಇತರರಿದ್ದರು.