ಕುಶಾಲನಗರ: ಕುಶಾಲನಗರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಬುಧವಾರ ಶಾಸಕ ಡಾ.ಮಂತರ್ಗೌಡ ಭೇಟಿ ನೀಡಿ ಪರಿಶೀಲಿಸಿದರು.
ಇಲ್ಲಿನ ಸಾಯಿ, ಚೌಡೇಶ್ವರಿ, ಕುವೆಂಪು ಬಡಾವಣೆ ಸೇರಿದಂತೆ ವಿವಿಧ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದ ಉಂಟಾದ ಸಮಸ್ಯೆಗಳ ಕುರಿತು ನಿವಾಸಿಗಳಿಂದ ಮಾಹಿತಿ ಪಡೆದರಲ್ಲದೆ, ಮುನ್ನೆಚ್ಚರಿಕೆಯಾಗಿ ಸೂಕ್ತ ಕ್ರಮ ವಹಿಸುವ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಿದರು.
ಕಾವೇರಿ ನದಿ ದಂಡೆಯಲ್ಲಿ ನೀರಾವರಿ ನಿಗಮದ ಮೂಲಕ ಕೈಗೊಂಡಿರುವ ಪ್ರವಾಹ ತಡೆಗೋಡೆ ಕಾಮಗಾರಿಯನ್ನೂ ಶಾಸಕರು ಇದೇ ವೇಳೆ ವೀಕ್ಷಿಸಿದರು.
ತೀವ್ರ ಮಳೆಯಿಂದ ಹಲವು ಲೇಔಟ್ಗಳ ಚರಂಡಿಗಳು ಉಕ್ಕಿ ಹರಿದು ರಸ್ತೆ ಮೇಲೆ ಗಲೀಜು ಹರಿಯುತ್ತಿದೆ. ಮನೆಯಂಗಳಕ್ಕೂ ನೀರು ನುಗ್ಗಿದ್ದು, ಈ ಬಗ್ಗೆ ಕ್ರಮ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಯಿತು. ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಹೊಸ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಲು ಸಾಧ್ಯವಿಲ್ಲ. ನೀತಿ ಸಂಹಿತೆ ಮುಗಿದ ನಂತರ ಇಲ್ಲಿ ಹಲವು ಕಾಮಗಾರಿಗಳನ್ನು ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ವಿ.ಪಿ.ಶಶಿಧರ್, ಪ್ರಮೋದ್ ಮುತ್ತಪ್ಪ, ಕೆ.ಪಿ.ಚಂದ್ರಕಲಾ, ಹರೀಶ್, ರಂಜನ್, ರೋಷನ್ ಇತರರಿದ್ದರು.