ಮಸ್ಕಿ: ಕಾಂಗ್ರೆಸ್ನವರು ರಾಜ್ಯದಲ್ಲಿ ಬಜರಂಗದಳ ನಿಷೇಧ ಮಾಡುವುದಾಗಿ ತಿಳಿಸಿದ್ದು, ಅದು ಸಾಧ್ಯವಿಲ್ಲದ ಮಾತೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಬಜರಂಗದಳ ನಿಷೇಧ ಮಾಡುವುದಾಗಿ ಹೇಳಿರುವ ಕಾಂಗ್ರೆಸ್ಗೆ ಯಾವುದೇ ಕಾರಣಕ್ಕೂ ಅಧಿಕಾರ ನೀಡಬಾರದು. ರಾಹುಲ್ ಗಾಂಧಿಗೆ ಲೀಟರ್ ಹಾಗೂ ಮೀಟರ್ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಇಂಥವರ ಕೈಯಲ್ಲಿ ದೇಶ ಕೊಟ್ಟರೆ ಏನಾಗಲಿದೆ ಎಂದು ಚಿಂತನೆ ಮಾಡಿ.
ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಮಕ್ಕಳಾಗಲ್ಲ ಎಂದು ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೊದಲು ತಾವೇ ಹೋಗಿ ಲಸಿಕೆ ಹಾಕಿಸಿ ಕೊಂಡು ಬಂದರು ಎಂದು ಹೇಳಿದರು.
ಇದನ್ನೂ ಓದಿ: ಜನರ ಹಣ ಕರ್ಚು ಮಾಡದೇ ಪ್ರಚಾರ ಮಾಡುವುದು ಹೇಗೆ? ಐಡಿಯಾ ಕೊಡಿ ಎಂದ ನಟ ಉಪೇಂದ್ರ
ಸಂಸದ ಪ್ರತಾಪಸಿಂಹ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಆಡಳಿತದಿಂದಾಗಿ ದೇಶ ಸುರಕ್ಷಿತವಾಗಿದೆ. ದೇಶದಲ್ಲಿನ ಸಾವಿರಾರು ಪ್ರಮುಖ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಲೆ ಇದ್ದು, ಉತ್ತರ ಪ್ರದೇಶದ ಬುಲ್ಡೋಜರ್ ಬಾಬಾ ಬಂದರೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಕಾರ್ಯಕರ್ತರು ಸೇರುತ್ತಾರೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿನ್ ಲಾಡೆನ್ ಸರ್ಕಾರ ನಿರ್ಮಾಣ ಆಗಲಿದ್ದು, ಈ ಬಗ್ಗೆ ಜನರು ಎಚ್ಚತ್ತುಕೊಳ್ಳಬೇಕು. ಕಾಂಗ್ರೆಸ್ನವರು ಮಂಗ್ಯಾ ಮಾಡಲು ನೋಡುತ್ತಿದ್ದು, ಮಂಗ್ಯಾ ಆಗಬಾರದು. ಈ ಕಾರ್ಯಕ್ರಮಕ್ಕೆ ಅಮಿತ್ ಷಾ ಬರಬೇಕಿತ್ತು. ಆದರೆ ಅನ್ಯ ಕಾರ್ಯಕ್ರಮದಿಂದಾಗಿ ಅವರು ಬಂದಿಲ್ಲ ಎಂದು ಪ್ರತಾಪಸಿಂಹ ಹೇಳಿದರು.
ಕಾಂಗ್ರೆಸ್ ಸರ್ಕಾರ ಬರೋದು ಗ್ಯಾರಂಟಿ ಇಲ್ಲ
ಕೇಂದ್ರ ಅರೋಗ್ಯ ಸಚಿವ ಮನ್ಸೂಖ್ ಮಾಂಡವಿಯಾ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬರೋದು ಗ್ಯಾರಂಟಿ ಇಲ್ಲ. ಇನ್ನು ಕಾಂಗ್ರೆಸ್ನವರ ಗ್ಯಾರಂಟಿ ಕಾರ್ಡ್ಗೆ ಬೆಲೆ ಎಲ್ಲಿದೆ ಎಂದರು.
ಉತ್ತರ ಪ್ರದೇಶದ ಮಾಜಿ ಸಚಿವ ಸತೀಶ್ ಚಂದ್ರ ದ್ವಿವೇದಿ, ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿ ಗೌಡ ಪಾಟೀಲ್, ಮಲ್ಲಪ್ಪ ಅಂಕುಶದೊಡ್ಡಿ, ಸಿದ್ದಣ್ಣ ಹೂವಿನಬಾವಿ, ಶಿವಕುಮಾರ ವಟಗಲ್, ಶಾರದಾ ರಾಠೋಡ್ ಮಾತನಾಡಿದರು. ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಳ್ಳಿ, ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಅಂದಾನಪ್ಪ ಗುಂಡಳ್ಳಿ, ಬಸನಗೌಡ ಪೊಲೀಸ್ ಪಾಟೀಲ್ ಇತರರು ಇದ್ದರು.
ಅಮಿತ್ ಷಾ ಪ್ರವಾಸ ದಿಡೀರ್ ರದ್ದು
ಕೇಂದ್ರ ಗೃಹ ಸಚಿವ ಅಮಿತ್ ಷಾ ಶುಕ್ರವಾರ ನಗರಕ್ಕೆ ಬರಬೇಕಿತ್ತು. ಇದಕ್ಕಾಗಿ ಬಿಜೆಪಿಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆಯ ಘಳಿಗೆಯಲ್ಲಿ ಅಮಿತ್ ಷಾ ಬರಲಿಲ್ಲ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರಲ್ಲಿ ನಿರಾಸೆ ಮೂಡಿತ್ತು.