ರಟ್ಟಿಹಳ್ಳಿ: ಮದಗ ಕೆರೆಯ ಎಡ ಮತ್ತು ಬಲದಂಡೆ ಕಾಲುವೆಗಳನ್ನು ಸ್ವಚ್ಛತೆಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕ ಯು.ಬಿ. ಬಣಕಾರ ಸೂಚಿಸಿದರು.
ತಾಲೂಕಿನ ಕೋಡಮಗ್ಗಿ ಗ್ರಾಮದ ಬಳಿಯ ಮದಗ ಕೆರೆಯ ಕಾಲುವೆ ಸ್ಥಳಕ್ಕೆ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಿತಿಗತಿ ವೀಕ್ಷಿಸಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಭಾಗದಲ್ಲಿ ರೈತರು ಹೆಚ್ಚು ಭತ್ತ ಬೆಳೆಯುತ್ತಾರೆ. ಈ ಬೆಳೆಗೆ ಹೆಚ್ಚು ನೀರಿನ ಅವಶ್ಯಕತೆ ಇದೆ. ಮದಗದ ಕೆರೆಯ ಎಡ ಮತ್ತು ಬಲದಂಡೆ ಸೇರಿ ಸುಮಾರು 25 ಕಿ.ಮೀ. ವ್ಯಾಪ್ತಿ ಒಳಗೊಂಡಿದೆ. ಸುಮಾರು ವರ್ಷಗಳಿಂದ ಈ ಕಾಲುವೆ ಸ್ವಚ್ಛಗೊಳಿಸದಿರುವುದರಿಂದ ಗಿಡಗಂಟಿಗಳು ಜಂಗಲ್ನಂತೆ ಬೆಳೆದಿವೆ. ಕಾಲುವೆಯಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ರೈತರು ಜಮೀನುಗಳಿಗೆ ನೀರು ಹಾಯಿಸಲು ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅಧಿವೇಶನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಮತ್ತು ನೀರಾವರಿ ಇಲಾಖೆ ಎಂ.ಡಿ. ಅವರಿಗೆ ಕಾಲುವೆ ದುರಸ್ತಿ ಮತ್ತು ಸ್ವಚ್ಛತೆಗೆ 20 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸಿರುವ ಡಿ.ಕೆ. ಶಿವಕುಮಾರ, ಮುಂದಿನ ದಿನಗಳಲ್ಲಿ ಅನುದಾನ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಸದ್ಯ ಕಾಲುವೆಯಲ್ಲಿ ಸ್ವಚ್ಛತೆ ಕೈಗೊಂಡು ಹೂಳು ತೆಗೆಯಬೇಕು ಎಂದು ಸೂಚಿಸಿದರು.
ಹಾನಗಲ್ಲ ಬೃಹತ್ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಲ್ಹಾದ ಶೆಟ್ಟಿ ಮಾತನಾಡಿ, ಕೆರೆ ನೀರು ಕಾಲುವೆಯಲ್ಲಿ ಸರಾಗವಾಗಿ ಹರಿಯುವಂತೆ ಸುಮಾರು 16 ಕಿ.ಮೀ. ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಕೆಲಸ ನಾಳೆಯಿಂದ ಪ್ರಾರಂಭಿಸಲಾಗುವುದು ಎಂದು ಹೇಳಿದರು
ಸಹಾಯಕ ಇಂಜಿನಿಯರ್ ರಾಕೇಶ, ವಾಮನ್ ನಲವಾಡಿ, ಗಂಗನಗೌಡ್ರ ಪಾಟೀಲ, ಪ್ರಭು ಮಳವಳ್ಳಿ, ವಿಶ್ವ ಚಳಗೇರಿ, ರಾಜು ಬ್ಯಾಡಗಿ, ಶಂಭಣ್ಣ ಹಂಸಬಾವಿ ಇತರರು ಇದ್ದರು.