ಬೆಂಗಳೂರು: ನಾಪತ್ತೆಯಾಗಿದ್ದ ಸಹೋದರಿ ಸೋದರತೆಯನ್ನು ಸಾರುವ ರಕ್ಷಾಬಂಧನ ದಿನದಂದೇ ಪತ್ತೆಯಾಗಿದ್ದು, ಈ ಅಣ್ಣ-ತಂಗಿಯರ ಪಾಲಿಗೆ ಪೊಲೀಸ್ ಠಾಣೆಯಲ್ಲೇ ಅವಿಸ್ಮರಣೀಯ ರಕ್ಷಾಬಂಧನ ಆಚರಣೆ ಆದಂತಾಗಿದೆ.
ಎರಡು ವಾರಗಳ ಹಿಂದೆ ತಾಯಿಯ ಚಿಕಿತ್ಸೆಗೆಂದು ರಿಮಿ ಅಡ್ಡಿ ಎಂಬಾಕೆ ಆಸ್ಪತ್ರೆಗೆ ತೆರಳಿದ್ದಳು. ಆದರೆ ತಾಯಿ ಆಸ್ಪತ್ರೆಯಲ್ಲಿ ಇರುವಾಗಲೇ ಆಕೆ ನಾಪತ್ತೆಯಾಗಿದ್ದಳು. ರಿಮಿ ಅಡ್ಡಿ ಕಾಣೆಯಾಗಿರುವ ಕುರಿತು ಆಕೆಯ ಅಣ್ಣ ವಿವೇಕ್ ಅಡ್ಡಿ ಆಗಸ್ಟ್ 6ರಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ತನಿಖೆಗಿಳಿದ ಪೊಲೀಸರು ಸಿಸಿಟಿವಿ ಕ್ಲಿಪ್ಪಿಂಗ್ಸ್ ಪರಿಶೀಲಿಸಿದಾಗ ರಿಮಿ ಅಡ್ಡಿ ಬೈಕ್ವೊಂದನ್ನು ಹತ್ತಿ ಹೋಗಿರುವುದು ಪತ್ತೆಯಾಗಿತ್ತು. ನಂತರ ವೀರಣ್ಣಪಾಳ್ಯದಲ್ಲಿ ಬೈಕ್ನಿಂದ ಇಳಿದಿರುವುದು ಕೂಡ ಕಂಡುಬಂದಿತ್ತು. ಈ ಸುಳಿವುಗಳನ್ನು ಆಧರಿಸಿ ಪೊಲೀಸರು ಡಿಜೆಹಳ್ಳಿ, ಗೋವಿಂದಪುರ, ಕೆಜಿ ಹಳ್ಳಿ ಸೇರಿ ಹಲವೆಡೆಯ ಸುಮಾರು 100 ಸಿಸಿಟಿವಿ ಕ್ಯಾಮರಾ ಕ್ಲಿಪ್ಪಿಂಗ್ಸ್ ಪರಿಶೀಲಿಸಿದ್ದರು. ಮಾತ್ರವಲ್ಲದೆ ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಸುತ್ತಮುತ್ತ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ಪೂಜೆ ವೇಳೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದ ಪೂಜಾರಿ ಸಾವು; ನೋಡನೋಡುತ್ತಿದ್ದಂತೆ ನೂರಾರು ಅಡಿ ಆಳಕ್ಕೆ ಉರುಳಿದ ದೇಹ..
ತೀವ್ರ ಹುಡುಕಾಟಕ್ಕಿಳಿದ ಪೊಲೀಸರಿಗೆ ಇಂದು ಮಾಗಡಿ ಬಳಿ ರಿಮಿ ಅಡ್ಡಿ ಪತ್ತೆಯಾಗಿದ್ದಾರೆ. ಆಕೆಯನ್ನು ಠಾಣೆಗೆ ಕರೆತಂದು ವಿವೇಕ್ಗೆ ಮಾಹಿತಿ ತಿಳಿಸಲಾಗಿತ್ತು. ಪೊಲೀಸ್ ಠಾಣೆಯಲ್ಲೇ ರಿಮಿಯಿಂದ ವಿವೇಕ್ಗೆ ರಾಖಿ ಕಟ್ಟಿಸಿ, ಕೇಕ್ ಕತ್ತರಿಸಿ, ಶುಭ ಹಾರೈಸಿ ಅಣ್ಣ-ತಂಗಿಯರನ್ನು ಅಮೃತಹಳ್ಳಿ ಪೊಲೀಸರು ಮನೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.