ಬಾಳೆಹೊನ್ನೂರು: ಹುಯಿಗೆರೆ ಗ್ರಾಮದ ಅಂಡವಾನೆಯಿಂದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಎ.ಎಂ.ರಮೇಶ್ ಶೆಟ್ಟಿ (58) ಭಾನುವಾರ ಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ರಮೇಶ್ ಶೆಟ್ಟಿ ಶುಕ್ರವಾರ ಬಾಳೆಹೊನ್ನೂರಿಗೆ ತೆರಳುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದವರು ವಾಪಸ್ ಬಂದಿರಲಿಲ್ಲ. ಕುಟುಂಬಸ್ಥರು ಭಾನುವಾರ ಹುಡುಕುತ್ತಿದ್ದಾಗ ಅಂಡವಾನೆಯ ಗದ್ದೆಮನೆ ಬಳಿ ಭದ್ರಾ ನದಿ ದಡದಲ್ಲಿ ರಮೇಶ್ ಅವರ ಪಾದರಕ್ಷೆ ಪತ್ತೆಯಾಯಿತು. ಅನುಮಾನಗೊಂಡು ಖಾಂಡ್ಯದ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ಘಟಕದ ಸದಸ್ಯರೊಂದಿಗೆ ನದಿಯಲ್ಲಿ ಶೋಧಿಸಿದಾಗ ಶವ ಪತ್ತೆಯಾಗಿದೆ. ರಮೇಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪಿಎಸ್ಐ ವಿ.ಟಿ.ದಿಲೀಪ್ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.