ಬೆಂಗಳೂರು: ಆತಿಥೇಯ ಭಾರತ ಮತ್ತು ಪ್ರವಾಸಿ ಶ್ರೀಲಂಕಾ ತಂಡಗಳ ನಡುವಿನ 2ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾ ಲೋಪ ಎದುರಾಯಿತು. ಕೊನೇ ಅವಧಿಯ ಆಟದ ವೇಳೆ ಮೈದಾನಕ್ಕೆ ನುಗ್ಗಿದ ಪ್ರೇಕ್ಷಕರು ಭದ್ರತಾ ಸಿಬ್ಬಂದಿ ಮತ್ತು ಪೊಲೀಸರನ್ನು ಸತಾಯಿಸಿದರು. ಕರೊನಾ ಕಾಲದಲ್ಲಿ ಕ್ರಿಕೆಟ್ ತಂಡಗಳು ಬಯೋಬಬಲ್ ನಿರ್ಮಿಸಿ ಆಡುತ್ತಿರುವ ಸಮಯದಲ್ಲಿ ಈ ಘಟನೆ ಆತಂಕ ಸೃಷ್ಟಿಸಿದೆ.
ದಿನದಾಟದ ಮುಕ್ತಾಯಕ್ಕೆ ಕೆಲವೇ ಹೊತ್ತು ಬಾಕಿ ಇರುವಾಗ ಮೈದಾನದ ಮೂರು ಕಡೆಯಿಂದ ಏಕಾಏಕಿ 4 ಮಂದಿ ಮೈದಾನಕ್ಕೆ ನುಗ್ಗಿದರು. ಲಂಕಾ ತಂಡ ಎರಡನೇ ಇನಿಂಗ್ಸ್ ಮಾಡುತ್ತಿದ್ದ ವೇಳೆ ಶಮಿ ಓವರ್ನಲ್ಲಿ ಚೆಂಡು ತಾಗಿದ ಪರಿಣಾಮ ಮೆಂಡಿಸ್ ಫಿಸಿಯೋ ಕರೆದರು. ಈ ವೇಳೆ ಏಕಾಏಕಿ ಮೈದಾನಕ್ಕೆ ನುಗ್ಗಿದ ಅಭಿಮಾನಿಗಳು, ಸ್ಲಿಪ್ನಲ್ಲಿ ಕೊಹ್ಲಿ ಬಳಿ ತೆರಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದರು. ಈ ವೇಳೆ ನಗುತ್ತಲೇ ಕೊಹ್ಲಿ ಕೂಡ ಸೆಲ್ಫಿಗೆ ಪೋಸ್ ನೀಡಿದರು.
King Kohli Fans Mass 😀🔥🙏
3 Fans Jumped the Security Fence to meet their Idol @imVkohli 👑 pic.twitter.com/T3vc4dnpqF
— Virat Kohli Trends™ (@TrendVirat) March 13, 2022
ತಕ್ಷಣವೇ ಮೈದಾನಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿ ನಾಲ್ವರನ್ನೂ ಕರೆದೊಯ್ದರು. ಆದರೆ ಅದಕ್ಕೆ ಮುನ್ನ ಮೈದಾನದ ತುಂಬೆಲ್ಲ ಓಡಾಡಿದ ಪ್ರೇಕ್ಷಕ, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ಕೈಗೆ ಸಿಗದೆ ಸತಾಯಿಸಿದರು. ಇದರಿಂದ ಕ್ರೀಡಾಂಗಣದಲ್ಲಿದ್ದ ಇತರ ಪ್ರೇಕ್ಷಕರು ಭಾರಿ ಮನರಂಜನೆ ಪಡೆದರು. ಈ ಮುನ್ನ ಸರಣಿಯ ಮೊಹಾಲಿ ಟೆಸ್ಟ್ ಪಂದ್ಯದ ವೇಳೆಯೂ ಪ್ರೇಕ್ಷಕನೊಬ್ಬ ಮೈದಾನಕ್ಕೆ ನುಗ್ಗಿದ್ದ. ಇವೆರಡು ಘಟನೆಗಳು, ಮುಂಬರುವ ಐಪಿಎಲ್ ಟೂರ್ನಿಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲು ಮುಂದಾಗಿರುವ ಬಿಸಿಸಿಐಗೆ ಹೆಚ್ಚಿನ ತಲೆನೋವು ಎದುರಾಗುವಂತೆ ಮಾಡಿವೆ.
Brief comedy event at Chinnaswamy stadium pic.twitter.com/NusuU6HGPz
— maelstrom (@originalmiks) March 13, 2022