ಬೆಂಗಳೂರು: ಪ್ರತಿ ಕ್ಷೇತ್ರದಲ್ಲೂ ಸಾಧನೆ ಮೂಲಕ ಸಾಮರ್ಥ್ಯ ನಿರೂಪಿಸುತ್ತಿರುವ ಸ್ತ್ರೀಯರು ನಿಸ್ವಾರ್ಥದಿಂದ ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು,
ಕಬ್ಬನ್ಪಾರ್ಕ್ನ ಜವಾಹರ ಬಾಲ ಭವನದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ತ್ರೀಯರ ಸ್ಥಾನಮಾನ ಬದಲಾಗುತ್ತಿದೆ. ಆಕೆ ಯಾವುದಾದರೊಂದು ಕ್ಷೇತ್ರದಲ್ಲಿ ಇಲ್ಲ ಎಂದರೆ, ಆ ಕ್ಷೇತ್ರ ಇನ್ನೂ ಅಭಿವೃದ್ಧಿ ಹೊಂದಿಲ್ಲ ಎಂದರ್ಥ. ಪ್ರತಿಕ್ಷಣದ ಹೋರಾಟದ ನಡುವೆಯೇ ಪರಿಶ್ರಮದಿಂದ ದುಡಿಯುವ ಮೂಲಕ ಸಾರ್ಥಕ ಬದುಕು ಕಟ್ಟಿಕೊಳ್ಳುತ್ತಿದ್ದು, ಶಿಕ್ಷಣದ ಕಾರಣದಿಂದ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತಿದೆ ಎಂದರು.
ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ
ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ 6 ಸಂಸ್ಥೆಗಳಿಗೆ, 20 ಸಾಧಕಿಯರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಗಲಕೋಟೆಯ ವಚನ ವೈಭವ ಮಹಿಳಾ ಜಾನಪದ ಸಾಂಸತಿಕ ಕಲಾ ಸಂಘ, ಧಾರವಾಡದ ಕಲ್ಕಿ ಎಜುಕೇಷನಲ್ ಆ್ಯಂಡ್ ಡೆವಲಪ್ಮೆಂಟ್ ಸೊಸೈಟಿ, ಬೀದರ್ನ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ದಕ್ಷಿಣ ಕನ್ನಡದ ಮಹಿಳಾ ಮಂಡಲ, ಶಿವಮೊಗ್ಗದ ದಿ ಶಿವಮೊಗ್ಗ ಮಲ್ಟಿ ಪರ್ಪಸ್ ಸೋಶಿಯಲ್ ಸರ್ವೀಸ್ ಸೊಸೈಟಿ, ಧಾರವಾಡದ ಹ್ಯಾಪಿ ಹೋಮ್ ಇಂಡಿಯಾ ಟ್ರಸ್ಟ್ಗಳು 50 ಸಾವಿರ ರೂ.ನಗದು ಒಳಗೊಂಡ ಪ್ರಶಸ್ತಿಗೆ ಭಾಜನವಾಗಿವೆ.
ಪ್ರಶಸ್ತಿ ಪಡೆದ ಸಾಧಕಿಯರು
ಮಹಿಳಾ ಅಭಿವೃದ್ಧಿ: ಬಿ.ಮಂಜುಳಾ ಇಟಗಿ, ಪಿ.ಆಶಾಲತಾ, ದೇವಿ ಸತೀಶ, ದೀಪಾ ಶಿವಕುಮಾರ, ನಾಗವ್ವಾ ಸಿದ್ದಪ್ಪಾ, ಪಿ.ಜಿ.ಅನಿತಾಲಕ್ಷ್ಮಿ, ನಿರ್ಮಾ ಡಿಸೋಜಾ, ಸ್ನೇಹಾ ಜಾಧವ್, ವೀಣಾ ಬಿರಾದಾರ.
ಕಲೆ: ಎಂ.ಶಾರದಾ, ಸರಸ್ವತಿ, ಎಸ್. ಸಿಂಧು, ವೀಣಾ ಉಮೇಶ್, ಎಂ.ಸವಿತಾ ಕುಲಕರ್ಣಿ.
ಕ್ರೀಡೆ: ರುಮಾನ ಕೌಸರ್, ಸಾಯೀಶ್ವರಿ ಗಂಗಾರಾಮ
ಶಿಕ್ಷಣ: ಕಾವೇರಿ ಶಿವಶಂಕರಯ್ಯ
ಸಾಹಿತ್ಯ: ಶುಭಾ, ಶಕುಂತಲಾ ಹಿರೇಮಠ, ಡಾ.ವಿ.ವಿ. ಹಿರೇಮಠ. (ಪ್ರಶಸ್ತಿಯು 25 ಸಾವಿರ ರೂ. ನಗದು ಒಳಗೊಂಡಿದೆ)
ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 3 ಸ್ತ್ರೀ ಶಕ್ತಿ ಗುಂಪು, 3 ಸ್ತ್ರೀ&ಶಕ್ತಿ ಒಕ್ಕೂಟ ಹಾಗೂ ವಿಭಾಗೀಯ ಮಟ್ಟದಲ್ಲಿ 4 ಸ್ತ್ರೀ ಶಕ್ತಿ ಗುಂಪುಗಳಿಗೆ ಯಶೋಧರಮ್ಮ ದಾಸಪ್ಪ ಪ್ರಶಸ್ತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆಗಳ ಸಾಧನೆ ತಿಳಿಸುವ ‘ಅಂತರಾಳ’ ಕಿರುಹೊತ್ತಗೆ ಬಿಡುಗಡೆ ಮಾಡಲಾಯಿತು.
ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ, ಇಲಾಖೆಯ ಕಾರ್ಯದರ್ಶಿ ಡಾ.ಜಿ.ಎಸ್. ಪ್ರಕಾಶ್, ಬಾಲ ಭವನದ ಕಾರ್ಯದರ್ಶಿ ಬಿ.ಎಚ್.ನಿಶ್ಚಲ್, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಚ್. ಪುಷ್ಪಲತಾ, ಡಾ.ಮೈತ್ರಿ ಮತ್ತಿತರರಿದ್ದರು.
ಮಹಿಳೆ ನಾಲ್ಕು ಗೋಡೆಗಳ ಮಧ್ಯೆ ಇರಬೇಕೆಂಬ ಪರಿಸ್ಥಿತಿ ಈಗಿಲ್ಲ. ಶಿಕ್ಷಣದಿಂದಾಗಿ ಬದಲಾವಣೆ ಸಾಧ್ಯವಾಗಿದೆ. ರಾಜಕೀಯ, ಉದ್ಯಮ, ಸರ್ಕಾರಿ ನೌಕರಿ, ಕಲೆ ಸೇರಿ ವಿವಿಧ ರಂಗಗಳಲ್ಲಿ ತನ್ನದೇ ಛಾಪು ಮೂಡಿಸುತ್ತಿದ್ದಾರೆ.
-ಪದ್ಮಾವತಿ, ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ