ಮಂಗಳೂರು: ಲಾಕ್ಡೌನ್ ಸಡಿಲಿಕೆ ಮಾಡಿ ಹತೋಟಿ ತಪ್ಪಿದರೆ ಮತ್ತೆ ಅದನ್ನು ಬಿಗಿಗೊಳಿಸುವ ಅನಿವಾರ್ಯತೆ ಎದುರಾದೀತು, ಹಾಗಾಗಿ ಎಲ್ಲರೂ ಕರೊನಾ ನಿಯಂತ್ರಣಕ್ಕೆ ಸಹಕರಿಸಿ ನಾಲ್ಕಾರು ದಿನಗಳಲ್ಲಿ ಪಾಸಿಟಿವಿಟಿ ದರ ಶೇ.೩ಕ್ಕೆ ಇಳಿಕೆಯಾದರೆ ಲಾಕ್ಡೌನ್ ನಿಯಂತ್ರಣ ಮತ್ತಷ್ಟು ಸಡಿಲಿಕೆ ಮಾಡಲು ಅವಕಾಶ ಇದ್ದೇ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಜಿಲ್ಲೆಯಲ್ಲಿ ಕರೊನಾ ಟೆಸ್ಟ್ ಹೆಚ್ಚು ಮಾಡಲಾಗಿದ್ದು ೧೦೭೦೦ರಷ್ಟು ಪರೀಕ್ಷೆ ಮಾಡಿದ್ದರಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ ೫.೫ಕ್ಕೆ ಇಳಿಕೆಯಾಗಿದೆ. ಇನ್ನಷ್ಟು ಟೆಸ್ಟಿಂಗ್ ಹಾಗೂ ಲಸಿಕೆ ಹೆಚ್ಚು ಮಾಡಲಿದ್ದೇವೆ ಎಂದರು.
ಜನರು ನಮಗೆ ಕಷ್ಟ ಆಗ್ತದೆ, ತಿರುಗಾಟಕ್ಕೆ ಬಸ್ಗೆ ಅನುಮತಿ ಕೊಡಿ, ಬಟ್ಟೆ ಮಳಿಗೆ ತೆರೆಯಲು ಅನುವು ಮಾಡಿ ಎಂದೆಲ್ಲಾ ಕೇಳುತ್ತಿದ್ದಾರೆ, ಆದರೆ ನಮ್ಮ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು, ಎರಡು ದಿನ ಸಡಿಲಿಕೆ ಮಾಡಿ, ಜನರ ತಿರುಗಾಟ ಹೆಚ್ಚಾಗಿ ಮತ್ತೆ ಕೋವಿಡ್ ಏರಲು ಶುರುವಾದರೆ ಮತ್ತೆ ಲಾಕ್ಡೌನ್ ಬಿಗಿಗೊಳಿಸುವಂತಾಗುವುದು ಬೇಡ ಎಂಬ ಕಾರಣಕ್ಕೆ ಹಂತ ಹಂತವಾಗಿ ಸಡಿಲಿಕೆ ಮಾಡಲಾಗುತ್ತಿದೆ, ಜನರ ಸಹಕಾರ ಇರಲಿ ಎಂದು ಮನವಿ ಮಾಡಿದರು.