More

    ಸಮಸ್ಯೆ ಆಲಿಸಲು ಸಚಿವರೇ ಖುದ್ದು ಹೆಡಿಯಾಲಕ್ಕೆ ಭೇಟಿ

    ನಂಜನಗೂಡು: ತಾಲೂಕಿನ ಕಾಡಂಚಿನ ಪ್ರದೇಶದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ಖುದ್ದು ಅರಣ್ಯ ಸಚಿವರೇ ಹೆಡಿಯಾಲಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದು, ಅವರ ಸಮಕ್ಷಮದಲ್ಲೇ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

    ತಾಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ಹುಲಿ ದಾಳಿಗೆ ಬಲಿಯಾದ ಮೃತ ರತ್ನಮ್ಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳು ಮಹದೇವನಗರ ಗ್ರಾಮದ ವೆಂಕಟಭೋವಿ ಎಂಬುವರ ಮೇಲೂ ಹುಲಿ ದಾಳಿ ನಡೆಸಿತ್ತು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಒಂದು ತಿಂಗಳು ಕಳೆಯುವಷ್ಟರಲ್ಲೇ ಕೂಗಳತೆ ದೂರದಲ್ಲಿ ರತ್ನಮ್ಮ ಅವರನ್ನು ಹುಲಿ ಬಲಿ ಪಡೆದಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಗಮನಕ್ಕೆ ತಂದಾಗ ನ.28ರಂದು ಹೆಡಿಯಾಲ ಗ್ರಾಮಕ್ಕೆ ಭೇಟಿ ನೀಡಿ ಈ ಭಾಗದ ಸಮಸ್ಯೆಗಳನ್ನು ಆಲಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಅವರು ಭೇಟಿ ನೀಡಿದ ಸಂದರ್ಭದಲ್ಲಿ ಈ ಭಾಗದ ಜನರ ಸಮಸ್ಯೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟು ಪರಿಹರಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.

    ಅರಣ್ಯ ಪ್ರದೇಶದ ಗಡಿಯಂಚಿನಲ್ಲಿ ಬಾಕಿ ಉಳಿದಿರುವ ರೈಲ್ವೇ ಬ್ಯಾರಿಕೇಡ್ ಅಳವಡಿಕೆ, ತಂತಿ ಬೇಲಿ, ಗುಂಡಿ ತೆಗೆಯುವುದು, ಸೋಲಾರ್ ಅಳವಡಿಕೆ, ಬಳ್ಳೂರುಹುಂಡಿ ಕ್ರಾಸ್ ಬಳಿ ಕ್ಯಾಂಪ್ ತೆರೆಯುವುದು ಹೀಗೆ ಎಲ್ಲ ಸಮಸ್ಯೆಗಳನ್ನು ನಿವಾರಿಸಬೇಕೆಂಬುದು ಈ ಭಾಗದ ಜನರ ಬೇಡಿಕೆಯಾಗಿದೆ. ಎಲ್ಲವನ್ನೂ ಸಚಿವರು ಹಾಗೂ ಜನರ ಸಮ್ಮುಖದಲ್ಲೇ ಪ್ರಸ್ತಾಪಿಸುವುದಾಗಿ ತಿಳಿಸಿದರು.

    ವನ್ಯಜೀವಿ ಹಾಗೂ ಮಾನವ ಸಂಘರ್ಷ ತಡೆಗಟ್ಟುವಲ್ಲಿ ಅಧಿಕಾರಿಗಳ ಲೋಪದೋಷಗಳ ಬಗ್ಗೆಯೂ ಸಚಿವರ ಸಮ್ಮುಖದಲ್ಲೇ ಚರ್ಚಿಸಲಾಗುವುದು ಎಂದರು.
    15 ಲಕ್ಷ ರೂ. ಚೆಕ್ ವಿತರಣೆ: ಹುಲಿ ದಾಳಿಗೆ ಬಲಿಯಾದ ತಾಲೂಕಿನ ಬಳ್ಳೂರುಹುಂಡಿ ಗ್ರಾಮದ ರತ್ನಮ್ಮ ಅವರ ಅಂತಿಮ ದರ್ಶನ ಪಡೆದ ಶಾಸಕ ದರ್ಶನ್ ಧ್ರುವನಾರಾಯಣ ಅರಣ್ಯ ಇಲಾಖೆಯಿಂದ ನೀಡುವ 15 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಿಸಿದರು. ಮೃತ ರತ್ನಮ್ಮ ನಿವಾಸಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರತ್ನಮ್ಮ ಅವರ ಪುತ್ರರಿಗೆ ಪರಿಹಾರ ಚೆಕ್ ಹಸ್ತಾಂತರಿಸಿದರು.

    ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಬಂಡೀಪುರ ಯೋಜನೆಯ ಕ್ಷೇತ್ರ ನಿರ್ದೇಶಕ ರಮೇಶ್‌ಕುಮಾರ್, ಎಸಿಎಫ್ ಪರಮೇಶ್ವರ್, ಆರ್‌ಎಫ್‌ಒ ನಾರಾಯಣ, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್‌ರಾಜ್, ಜಿಪಂ ಮಾಜಿ ಸದಸ್ಯ ಕೆ.ಮಾರುತಿ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts