ಬೆಂಗಳೂರು: ಕಾಂಗ್ರೆಸ್ ನಡೆಸುತ್ತಿರುವ ‘ಪ್ರಜಾಧ್ವನಿ ಬಸ್ ಯಾತ್ರೆ’ ಬಗ್ಗೆ ಬಿಜೆಪಿಗೆ ಆತಂಕವಿಲ್ಲ. ಅದಕ್ಕೆ ಹೆಚ್ಚಿನ ಮಹತ್ವವನ್ನು ನೀಡಿಲ್ಲ. ಆದರೆ ಯಾತ್ರೆಯುದ್ದಕ್ಕೂ ಸುಳ್ಳು ಆರೋಪ, ಭ್ರಷ್ಟಾಚಾರದ ಬಗ್ಗೆ ಪುಂಖಾನುಪುಂಖವಾಗಿ ಹೇಳಿಕೆ ನೀಡುತ್ತಿರುವವರಿಗೆ ಆಡಳಿತ ಪಕ್ಷವಾಗಿ ಪ್ರತ್ಯುತ್ತರ ನೀಡಿ, ಜನರಿಗೆ ವಾಸ್ತವಾಂಶ ತಿಳಿಸಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಮರ್ಥಿಸಿಕೊಂಡರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಭ್ರಷ್ಟಾಚಾರ, ಧರ್ಮ ವಿಭಜನೆ, ಜಾತಿ ಮಧ್ಯೆ ಸಂಘರ್ಷ, ಲೋಕಾಯುಕ್ತ ಅಧಿಕಾರ ಮೊಟುಕು, ಅಭಿವೃದ್ಧಿ ಕಡೆಗಣನೆ ಮುಂತಾದ ಜನ ವಿರೋಧಿ ಕೃತ್ಯಗಳಿಂದ ಬೇಸತ್ತ ಜನರು ಕಳೆದ ಬಾರಿ ಕಾಂಗ್ರೆಸ್ ಅನ್ನು ತಿರಸ್ಕರಿಸಿದರು. 120 ಇದ್ದ ಸ್ಥಾನಗಳ ಸಂಖ್ಯೆ 79ಕ್ಕೆ ಇಳಿಸಿದ್ಸೇ ಸಿದ್ದರಾಮಯ್ಯ ಸಾಧನೆ. ಮಹಾನ್ ನಾಯಕ ಡಿ.ಕೆ.ಶಿವಕುಮಾರ್ ಪ್ರಜೆಗಳ ಧ್ವನಿ ಯಾವ ರೀತಿ ಆಲಿಸಿದ್ದಾರೆ ಎಂದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷದೊಳಗೆ ಪ್ರಜಾಪ್ರಭುತ್ವವಿಲ್ಲ, ಜನರ ಧ್ವನಿಯನ್ನು ಅದುಮಿಟ್ಟಿದ್ದು, ಅಂತಹ ಪಕ್ಷದ ನಾಯಕರು ಪ್ರಜಾಧ್ವನಿ ಯಾತ್ರೆ ನಡೆಸಿರುವುದು ಹಾಸ್ಯಾಸ್ಪದ ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಿಧಾನದ ಬಗ್ಗೆ ದೊಡ್ಡ ಸಿದ್ದರಾಮಯ್ಯ ಅವರು ‘ಸಿದ್ದು ನಿಜಕನಸಗಳು’ ಪುಸ್ತಕದಲ್ಲಿ ಏನಿದೆ ಎಂದು ತಿಳಿದುಕೊಳ್ಳದೆ, ಭಯಪಟ್ಟು ತಡೆಯಾಜ್ಞೆ ತಂದರು. ಅವರು ನೈಜ ಯಥಾಸ್ಥಿತಿವಾದಿ ಸಿದ್ದರಾಮಯ್ಯ ಎಂದು ಕಾಲೆಳೆದರು.
ರಾಮನಗರ ಜಿಲ್ಲೆಯ ಅಭಿವೃದ್ಧಿ ಜತೆಗೆ ಸ್ವಚ್ಛಗೊಳಿಸುವ ಕೆಲಸ ಈಗಾಗಲೇ ಆರಂಭಿಸಿದ್ದೇವೆ ಎಂದು ಡಿಕೆಶಿಗೆ ತಿರುಗೇಟು ನೀಡಿದ ಅಶ್ವತ್ಥ ನಾರಾಯಣ, ಬಿಜೆಪಿ ಕಾರ್ಯಕರ್ತರ ನೆರವಿನಿಂದ ಎಲ್ಲ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಾಲಯ ಹೊಂದಿದೆ. ಯಾವುದೋ ಖಾಸಗಿ ಕಂಪನಿ ಅಥವಾ ಟ್ರಸ್ಟ್ನ ನೆರವು ಪಡೆದಿಲ್ಲ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಮಾಹಿತಿ ಕೊರತೆಯಿದೆ ಎಂದರು.
5 ವರ್ಷದ ಮಗುವಿನ ಪ್ರಾಣ ಉಳಿಸಿಕೊಳ್ಳಲು ನೆರವಾಗಿ… ಮದ್ದೂರು ಮೂಲದ ದಂಪತಿ ಮನವಿ
ಅಳಿವಿನಂಚಿನಲ್ಲಿರುವ ಪ್ಯಾಂಗೊಲಿನ್ನ ಚಿಪ್ಪನ್ನು ಸಾಗಿಸುತ್ತಿದ್ದವನ ಬಂಧನ…