ಮಂಗಳೂರು: ಕಾಂತಾರ ಚಿತ್ರ ಬಂದ ಮೇಲೆ ತುಳುನಾಡಿನ ಆರಾಧನಾ ಪದ್ಧತಿಯಾದ ಭೂತಾರಾಧನೆ/ದೈವಾರಾಧನೆ ಎಲ್ಲೆಡೆ ಪರಿಚಿತವಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡಕ್ಕೆ ಬಂದಿದ್ದ ಸಂದರ್ಭ ಅಮಿತ್ ಷಾ ಕೂಡ ಮೆಚ್ಚುಗೆ ಸೂಚಿಸಿದ್ದರು. ತುಳುನಾಡಿನ ದೈವಗಳನ್ನು ಅವಮಾನ ಮಾಡಿದರೆ ಹಿಂದಿನಿಂದಲೂ ತುಳುನಾಡಿನ ಜನರು ಸಿಡಿದೇಳುತ್ತಿದ್ದರು. ಇದೀಗ ಸಚಿವರು ಕರಾವಳಿಯಲ್ಲಿ ಜನಮೆಚ್ಚುಗೆ ಪಡೆದ ‘ಶಿವದೂತೆ ಗುಳಿಗೆ’ (ಗುಳಿಗ) ತುಳು ನಾಟಕಕ್ಕೆ ಅವಮಾನ ಮಾಡಿದ್ದಾರೆ ಎನ್ನಲಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ನಾಟಕದ ಪೋಸ್ಟರ್ ನೋಡಿ ಭಾಷಣದಲ್ಲಿ ಗುಳಿಗನ ಬಗ್ಗೆ ಅಣಕ ಮಾಡಿ ತುಳುನಾಡಿನ ದೈವ ಗುಳಿಗನನ್ನು ಅವಮಾನಿಸಿದ್ದಾರೆ ಎನ್ನಲಾಗಿದ್ದು ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಭಾಷಣದಲ್ಲಿ ‘ಅದೇನೋ ಗುಳಿಗೆ ಗುಳಿಗೆ ಎಂದು ಪೋಸ್ಟರ್ ಹಾಕಿದ್ದಾರೆ, ಅದು ಜಾಪಾಳ ಗುಳಿಗೆಯೋ?’ ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿಗೆ ಸಂಬಂಧಿಸಿದ ವಿಡಿಯೋ ಇಲ್ಲಿದೆ:
ಕರಾವಳಿ ದಾಟಿ ಹೋದರೆ, ಆ ಭಾಗದಲ್ಲಿ ಜಾಪಾಳ ಗುಳಿಗೆ ಎಂದರೆ ವಾಂತಿ, ಭೇದಿಗೆ ಕೊಡುವ ಮಾತ್ರೆ ಎಂದರ್ಥವಾಗಿದೆ. ತುಳುವರು ನಂಬುವ ಗುಳಿಗ ದೈವಕ್ಕೆ ಜಾಪಾಳ ಗುಳಿಗೆ ಎಂದು ಹೇಳಿ ಅವಮಾನ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ‘ಭಾರಿ ಅಪಾಯ, ಇವರು ಜನರಿಗೆ ಜಾಪಾಳ ಗುಳಿಗೆ ಕೊಡ್ತಾರೋ ಏನೋ’ ಎಂದು ಸಚಿವರು ಹೇಳಿದ್ದಾರೆ
ಆಗಿದ್ದೇನು?
ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಪರ ಇದ್ದವರು ‘ಶಿವದೂತೆ ಗುಳಿಗೆ’ ತುಳು ನಾಟಕ ಆಯೋಜಿಸಿದ್ದರು. ಈ ನಾಟಕದ ಪ್ರಚಾರವಾಗಿ ರಸ್ತೆ ಬದಿ ಪೋಸ್ಟರ್ ಹಾಕಿದ್ದರು. ಅದಕ್ಕೆ ಆರಗ ಜ್ಞಾನೇಂದ್ರ ಗುಳಿಗನ ಬಗ್ಗೆ ಅಣಕ ಮಾಡಿದ್ದಾರೆ.
ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ ವಿಡಿಯೋ ಕರಾವಳಿಯಲ್ಲಿ ವೈರಲ್ ಆಗಿದ್ದು ಆರಗ ಜ್ಞಾನೇಂದ್ರ ಕ್ಷಮೆ ಯಾಚಿಸದಿದ್ದರೆ, ದೈವವೇ ತಕ್ಕ ಶಾಸ್ತಿ ಮಾಡಲಿದೆ ಎಂದು ಜನರು ಹಿಡಿಶಾಪ ಹಾಕಿದ್ದಾರೆ.