More

    ಮೆಸ್ಕಾಂ ಗುತ್ತಿಗೆದಾರರು ಬೀದಿಗೆ: ಆರಗ ಆತಂಕ

    ಶಿವಮೊಗ್ಗ: ಸರ್ಕಾರದ ತೀರ್ಮಾನದಿಂದ 15-20 ಸಾವಿರ ಕುಟುಂಬಗಳು ಬೀದಿಗೆ ಬೀಳುವ ಅಪಾಯವಿದೆ. ಎರಡು, ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಮೆಸ್ಕಾಂ ಗುತ್ತಿಗೆದಾರರು ಬೀದಿಗೆ ಬೀಳುವ ಆತಂಕವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

    ಅಕ್ರಮ, ಸಕ್ರಮ, ಗಂಗಾ ಕಲ್ಯಾಣ, ಕುಡಿಯುವ ನೀರಿನ ಯೋಜನೆ, ರೀ ಕಂಡಕ್ಟರಿಂಗ್ ಲಿಂಕ್‌ಲೈನ್ ಮುಂತಾದ ಬೃಹತ್ ಮೊತ್ತದ ದರ ಒಪ್ಪಂದ ಮತ್ತು ಟೆಂಡರ್‌ಗಳನ್ನು ಕೂಡಲೇ ರದ್ದುಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೆಸ್ಕಾಂನ ವಿದ್ಯುತ್ ಗುತ್ತಿಗೆದಾರರ ಸಂಘದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪದಾಧಿಕಾರಿಗಳು ನಡೆಸುತ್ತಿರುವ ಧರಣಿಯಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದರು.
    ಮೆಸ್ಕಾಂ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡುತ್ತಿದ್ದಾರೆ. ಮೆಸ್ಕಾಂ ನೇರವಾಗಿ ಯಾವುದೇ ಕಾಮಗಾರಿ ಮಾಡುವುದಿಲ್ಲ. ಹೀಗಿರುವಾಗ ಗುತ್ತಿಗೆದಾರರಿಗೆ ಸಮಸ್ಯೆಯಾಗುವ ನಿರ್ಣಯ ಕೈಗೊಂಡಿರುವುದು ದುರದೃಷ್ಟಕರ ಎಂದು ಹೇಳಿದರು.
    ತುಂಡು ಗುತ್ತಿಗೆಯನ್ನು ನೀಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಗ್ರಾಮೀಣ ವಿದ್ಯುದೀಕರಣ ಯೋಜನೆ ಜಾರಿಯಾದಾಗ ಕಾಮಗಾರಿ ವಿಳಂಬವಾಗಿತ್ತು. ಎರಡು ವರ್ಷ ಕಳೆದಿದ್ದರೂ ಕೆಲಸವಾಗಿರಲಿಲ್ಲ. ತುಂಡು ಗುತ್ತಿಗೆ ನೀಡಿದ ಬಳಿಕ ಕಾಮಗಾರಿ ಸರಾಗವಾಗಿ ನಡೆಯಿತು. 94ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮೆಸ್ಕಾಂ ಗುತ್ತಿಗೆದಾರರ ಪರವಾಗಿ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಕೆಲಸ ಮಾಡಿದ್ದೆ ಎಂದರು.
    ಒಂದು ಲಕ್ಷದಿಂದ 5 ಲಕ್ಷ ರೂ.ವರೆಗಿನ ಕಾಮಗಾರಿಗಳನ್ನು ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ಎಸ್.ಆರ್.ದರದಲ್ಲಿ ನೇರವಾಗಿ ಪೂರ್ಣ ಅಥವಾ ಆಂಶಿಕ ಗುತ್ತಿಗೆ ನೀಡುವ ಆದೇಶವಿದ್ದರೂ ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಟೆಂಡರ್ ಕರೆದಿರುವುದರಿಂದ ಗುತ್ತಿಗೆದಾರರು ಬೀದಿಗೆ ಬೀಳುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ಕೆ.ಮಹಾಲಿಂಗಪ್ಪ, ಉಪಾಧ್ಯಕ್ಷರಾದ ಎಂ.ಎನ್.ರುದ್ರಮುನಿ, ಕಾರ್ಯದರ್ಶಿ ಎನ್.ಕುಮಾರ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಆರ್.ಹರೀಶ್, ಉಪಾಧ್ಯಕ್ಷ ಯು.ನರೇಶ್, ಪ್ರಮುಖರಾದ ಮರಿಯಾರಾಜ್, ಎಚ್.ಇ.ಹರೀಶ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts